ಮುಂದಿನ ತಿಂಗಳಿನಿಂದ ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದರೆ ದಂಡ ಅಥವಾ ಜೈಲು ಶಿಕ್ಷೆ ಖಚಿತ! ಈ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಕನ್ನಡ ನಾಮಫಲಕ ಕಡ್ಡಾಯದ ಕುರಿತು ಅಕ್ಟೋಬರ್ 30ರಂದು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎಚ್. ಬಚ್ಚೇಗೌಡ ಹೇಳಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಆದೇಶ ಉಲ್ಲಂಘಿಸಿದವರಿಗೆ 10 ಸಾವಿರ ರೂ. ದಂಡ/ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಹೊರತು ಪಡಿಸಿ ಎಲ್ಲಾ ರಾಜ್ಯ ಮತ್ತು ಖಾಸಗಿ ಸಂಘ-ಸಂಸ್ಥೆಗಳು, ಕಂಪೆನಿಗಳು, ಕೈಗಾರಿಕೆ ಮತ್ತಿತರ ಕೇಂದ್ರ ಸಂಸ್ಥೆಗಳು ಸಾರ್ವಜನಿಕ ರಜೆ ಘೋಷಿಸಬೇಕು. ಈ ಕುರಿತು ಯಾವುದೇ ಸಂಘ-ಸಂಸ್ಥೆ, ಕಂಪೆನಿಗಳು ಹಾಗೂ ಕೈಗಾರಿಕೆಗಳು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸೂಚನೆ ನೀಡಿದ್ದಾರೆ.
|