ರಾಜ್ಯ ಸರ್ಕಾರ ನೀಡಲು ಉದ್ದೇಶಿಸಿರುವ 50 ರಾಜ್ಯೋತ್ಸವ ಪ್ರಶಸ್ತಿಗಳಿಗೆ ಇದುವರೆಗೆ ಬಂದಿರುವ ಅರ್ಜಿದಾರರ ಸಂಖ್ಯೆ ಸುಮಾರು ಹತ್ತು ಸಾವಿರ ಮೀರಿದೆ !
ಇದೀಗ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಆಕಾಂಕ್ಷಿಗಳ ಅರ್ಜಿ ವಿಲೇವಾರಿ ಮಾಡುವುದೇ ದೊಡ್ಡ ಕೆಲಸವಾಗಿದೆ. ಈಗ ಅಂತಿಮ ಪಟ್ಟಿ ಸಿದ್ಧಪಡಿಸುವ ಅಧಿಕಾರಿಗಳಿಗೆ ಸಮಯವೇ ಇಲ್ಲದಂತಾಗಿದೆ.
ಯಾವುದೇ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಿರುವ ರಾಜ್ಯ ಸರ್ಕಾರ ಈ ಬಾರಿ ಪ್ರಶಸ್ತಿಗಳ ಸಂಖ್ಯೆಯನ್ನು ಐವತ್ತಕ್ಕೆ ಮಿತಿಗೊಳಪಡಿಸಲು ತೀರ್ಮಾನಿಸಿದೆ.
ಅಂತೆಯೇ, ಸಚಿವರಾದ ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಆರ್. ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ನಿರ್ದೇಶಕರನ್ನೊಳಗೊಂಡ ಸಮಿತಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹೊಣೆ ಹೊತ್ತುಕೊಂಡಿದೆ.
ಪ್ರತಿ ಬಾರಿಯೂ ಸರ್ಕಾರದ ಬಿಗಿ ನಿಲುವುಗಳು ನಂತರ ಮುಜುಗರಕ್ಕೆ ಸಿಲುಕಿ ಪಟ್ಟಿಯನ್ನು ವಿಸ್ತರಿಸುವುದು ಸಾಮಾನ್ಯ. ಹೀಗೆ ಪ್ರತಿ ವರ್ಷವೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ರಾಜ್ಯೋತ್ಸವ ಪ್ರಶಸ್ತಿ ವಿವಾದ ಇದೀಗ ಅತ್ಯಧಿಕ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದರಿಂದ ಸಮಿತಿ ಯಾರನ್ನೆಲ್ಲಾ ಆಯ್ಕೆ ಮಾಡುತ್ತದೆ ಎಂದು ಕಾದುನೋಡಬೇಕಿದೆ. |