ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಮಠ ಮತ್ತು ಮಠಾಧೀಶರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ ಆರೋಪಿಸಿದರು.
ಸರ್ಕಾರದ ನೆರವು ನೀಡುವ ನೆಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಠಗಳನ್ನು ಬಿಜೆಪಿಮಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಮಾರಂಭಗಳಲ್ಲಿ ಪ್ರತಿಪಕ್ಷದ ವಿರುದ್ಧ ದೂರು ನೀಡುತ್ತಿರುವ ಯಡಿಯೂರಪ್ಪ, ಮಠಾಧೀಶರು ಹೇಳಿದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ತಮ್ಮನ್ನು ಗೆಲ್ಲಿಸಿ, ಮುಖ್ಯಮಂತ್ರಿ ಮಾಡಿದವರು ಮತದಾರರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಸಿದ್ದಗಂಗಾಶ್ರೀಗಳು, ಸುತ್ತೂರುಶ್ರೀಗಳು ಹಾಗೂ ಇತರ ಮಠಾಧೀಶರು ರಾಜ್ಯದ ಎಲ್ಲ ವರ್ಗ, ಜನಾಂಗಗಳನ್ನು ಸಮಾನವಾಗಿ ಗೌರವಿಸುತ್ತ ಧರ್ಮ ಬೋಧನೆ ಹಾಗೂ ಶೈಕ್ಷಣಿಕ ಪ್ರಸಾರದಲ್ಲಿ ತೊಡಗಿದೆ.
ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಮೂಲಕ ಯಡಿಯೂರಪ್ಪ ಮಠಗಳ ಬಗ್ಗೆ ಜನತೆಯಲ್ಲಿ ತಿರಸ್ಕಾರ ಮೂಡುವಂತೆ ಮಾಡುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಠಗಳನ್ನು ಬಿಜೆಪಿಗೆ ಯಾರೂ ಕಾಂಟ್ರಾಕ್ಟ್ ನೀಡಿಲ್ಲ, ಮಠ-ಮಠಾಧೀಶರು ಎಲ್ಲರಿಗೂ ಬೇಕು, ಬೇರೆ ವರ್ಗದವರಿಗೂ ಆ ಮಠಗಳು ಮುಕ್ತವಾಗಲಿ, ಎಲ್ಲವನ್ನೂ ಕೇಸರಿಮಯ ಮಾಡಬೇಡಿ ಎಂದು ಎಚ್ಚರಿಸಿದರು. |