ದೇಶದ ಬಾಹ್ಯಕಾಶ ಕ್ಷೇತ್ರದಲ್ಲಿಯೇ ಹೊಸ ಮುನ್ನುಡಿ ಬರೆದ ಚಂದ್ರಯಾನ-1 ಯಶಸ್ವಿಗೆ ಕಾರಣರಾದ ವಿಜ್ಞಾನಿಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ ನಗರದ ಬ್ಯಾಲಾಳುವಿನಲ್ಲಿರುವ ಉಪಗ್ರಹ ನಿಯಂತ್ರಣ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿದ ಮುಖ್ಯಮಂತ್ರಿಗಳು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಮಾಧವನ್ ನಾಯರ್, ಭಾರತದ ಚೊಚ್ಚಲ ಚಂದ್ರಯಾನ ಇಂದು ಬಾಹ್ಯಕಾಶ ವಿಜ್ಞಾನದಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಚಂದ್ರಯಾನ ಇದೀಗ 75 ಸಾವಿರ ಕಿ.ಮೀ. ದೂರ ತಲುಪಿದ್ದು, ಮುಂದಿನ ತಿಂಗಳ 8ರಂದು ಚಂದ್ರ ಕಕ್ಷೆ ಸೇರಲಿದೆ ಎಂದು ಅವರು ವಿವರಣೆ ನೀಡಿದರು.
ಭವಿಷ್ಯದಲ್ಲಿ ಮಾನವ ಸಹಿತ ಚಂದ್ರಯಾನ ನಡೆಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ವ್ಯೋಮ ಯಾತ್ರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನಡೆಸಲಾಗುವುದು. ಅದಕ್ಕಾಗಿ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದೆ.
|