ಈಗಾಗಲೇ ಅಧಿಕ ಹಣದ ಆಮಿಷದಿಂದ ಟೋಪಿ ಹಾಕಿಸಿಕೊಂಡಿದ್ದ ಜನರನ್ನು ಮತ್ತೆ ವಂಚಿಸುವ ನಿಟ್ಟಿನಲ್ಲಿ ಹೆಚ್ಚಿನ ಬಡ್ಡಿ ನೀಡಿ ವಂಚಿಸುತ್ತಿರುವ ವೆಬ್ಸೈಟ್ವೊಂದು ಚಾಲ್ತಿಯಲ್ಲಿದ್ದು, ಅದರಲ್ಲಿ ಸಾರ್ವಜನಿಕರು ಹಣ ಹೂಡಿ ಮೋಸ ಹೋಗದಂತೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಎಚ್ಚರಿಕೆ ನೀಡಿದ್ದಾರೆ.
ಸಿಟಿ ಮೌಜಿಮೆಸ್ ಹೆಸರಿನ ವೆಬ್ಸೈಟ್ ರಿಸರ್ವ್ ಬ್ಯಾಂಕಿನ ಬ್ಯಾಂಕಿನೇತರ ಉದ್ದೇಶಕ್ಕಾಗಿ ಹಣಕಾಸು ಸಂಸ್ಥೆ ಎಂದು ನೋಂದಾಯಿಸಿಕೊಂಡಿರುವುದಾಗಿ ಹೇಳಿಕೊಂಡು ಸಾರ್ವಜನಿಕರಿಗೆ ಅತಿ ಹೆಚ್ಚಿನ ಬಡ್ಡಿ ಲಾಭಾಂಶದ ಆಸೆ ತೋರಿಸಿ ವಂಚಿಸುತ್ತಿದ್ದು ಅದನ್ನು ನಂಬದಂತೆ ಬಿದರಿ ವಿನಂತಿಸಿಕೊಂಡಿದ್ದಾರೆ.
ಈ ವೆಬ್ಸೈಟ್ ಮೇಲ್ನೋಟಕ್ಕೆ ವಂಚನೆಯಿಂದ ಕೂಡಿದೆ ಎಂದು ತಿಳಿದು ಬಂದಿದೆ ಎಂದಿರುವ ಅವರು ಸಂಸ್ಥೆಯ ಸತ್ಯಾಸತ್ಯತೆಯನ್ನು ಅರಿಯಲು ರಿಸರ್ವ್ ಬ್ಯಾಂಕ್ ಹಾಗೂ ಸಿಓಡಿಯ ಡಿಜಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಸತ್ಯಾಂಶ ತಿಳಿಯುವರೆಗೆ ಯಾರೂ ಹಣ ಹೂಡದೇ ಸಾರ್ಜಜನಿಕರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ. |