ಕನ್ನಡ ಸಾಹಿತ್ಯ ಪರಿಷತ್ನ ನೃಪತುಂಗ ಪ್ರಶಸ್ತಿಗೆ ಈ ಬಾರಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಆಯ್ಕೆಯಾಗಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಕೋಟಿ ರೂಪಾಯಿ ದತ್ತಿ ನಿಧಿಯಿಂದ ನೀಡಲಾಗುವ ಈ ಪ್ರಶಸ್ತಿಯ ಮೊತ್ತ 5 ಲಕ್ಷ ರೂ.ಗಳಾಗಿರುತ್ತದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಆರ್.ಕೆ. ನಲ್ಲೂರು ಪ್ರಸಾದ್, ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪಾಟೀಲ್ ಪುಟ್ಟಪ್ಪ ಅವರನ್ನು 2008ನೇ ವರ್ಷದ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಪಾಟೀಲ್ ಪುಟ್ಟಪ್ಪನವರು, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ತಮಗೆ ದೊರೆತಿರುವುದು ಕನ್ನಡ ನಾಡು-ನುಡಿ ರಕ್ಷಣೆಯ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆಸಲ್ಲಿಸಿರುವ ಹಿರಿಯ ಸಾಹಿತಿಯೊಬ್ಬರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಕಳೆದ ವರ್ಷದಿಂದ ಆರಂಭಿಸಲಾಗಿರುವ ಈ ಪ್ರಶಸ್ತಿಗೆ ಮೊದಲಿಗರಾಗಿ ವಿಶ್ರಾಂತ ಕುಲಪತಿ ದೇ. ಜವರೇಗೌಡ ಅವರು ಭಾಜನರಾಗಿದ್ದರು. |