ಆರ್ಥಿಕ ಹಿಂಜರಿಕೆಯ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಜಾಗತಿಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನವೆಂಬರ್ 6ರಿಂದ ಮೂರು ದಿನಗಳ ಕಾಲ ಐಟಿಬಿಟಿ ಮೇಳವನ್ನು ನಡೆಸಲಾಗುವುದು ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳವು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೇಶೀಯ ಮತ್ತು ವಿದೇಶಿ ಕಂಪೆನಿಗಳ ವಹಿವಾಟು ವೃದ್ಧಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗಿದ್ದು, ಗುಜರಾತ್ ರಾಜ್ಯ ಪಾಲುದಾರ ರಾಜ್ಯವಾಗಿ ಈ ಮೇಳದಲ್ಲಿ ಭಾಗವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಆರೋಗ್ಯ ರಕ್ಷಣೆ, ದೂರ ಸಂಪರ್ಕ, ಶಿಕ್ಷಣ, ಸೈಬರ್ ಮತ್ತು ರಾಷ್ಟ್ರೀಯ ಭದ್ರತೆ, ಹಸಿರು ತಂತ್ರಜ್ಞಾನಕ್ಕೆ ಒತ್ತು ನೀಡಲಾಗುತ್ತದೆ. ಐಟಿ ಉತ್ಪಾದನೆ- ಸ್ವದೇಶಿ ನಿರ್ಮಾಣ ಎಂಬ ವಿಷಯದ ಕುರಿತು ಚರ್ಚಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಈ ಮೇಳವು 12 ಸಾವಿರ ಚದುರ ಮೀಟರ್ ಗಳಲ್ಲಿ ಸಮಾವೇಶ ನಡೆಯಲಿದ್ದು, 100 ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು. |