ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವಕ್ಕೆ (ನ.3ರಿಂದ 5) ಸೋಮವಾರ ಸಂಜೆ ಚಾಲನೆಗೊಳ್ಳಲಿದೆ. ಭಾರತೀಯ ಜನತಾಪಕ್ಷದ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ಅವರು ಇಂದು ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಅನಂತ್ ಕುಮಾರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಜಿ.ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು,ಜಿ. ಕರುಣಾಕರ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಂಪಿ ಉತ್ಸವದಲ್ಲಿ ಆಶಾ ಬೋಂಸ್ಲೆ, ಸೋನು ನಿಗಮ್, ಪಂಕಜ್ ಉಧಾಸ್, ಪಂ.ವೆಂಕಟೇಶ ಕುಮಾರ್, ಸುಭದ್ರಮ್ಮ ಮನ್ಸೂರ್, ಬಿ.ಆರ್.ಛಾಯಾ ಸೇರಿದಂತೆ ಹಲವಾರು ಕಲಾವಿದರು ತಮ್ಮ ಕಾರ್ಯಕ್ರಮ ನೀಡಲಿದ್ದಾರೆ.ಇದೇ ಮೊದಲ ಬಾರಿ ಹಂಪಿ ಉತ್ಸವಕ್ಕೆ ಅದ್ದೂರಿ ಸಿದ್ಧತೆ ನಡೆಸಲಾಗಿದೆ. ಹಂಪಿ ಸುತ್ತಮುತ್ತಲಿನ ಪ್ರದೇಶ ತಳಿರು-ತೋರಣಗಳಿಂದ ಶೋಭಿಸುತ್ತಿದೆ. ಇತಿಹಾಸದ ಗತವೈಭವಗಳನ್ನು ಸಾರುವ ಕಲ್ಲು-ಬಂಡೆಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.ಇದು 14ನೇ ಹಂಪಿ ಉತ್ಸವ, 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 6ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರಿಗಾಗಿ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಕ್ಕಾಗಿ ಹಂಪಿಯ ಆರು ಕಡೆ ಭೋಜನಾಲಯ ಸಿದ್ಧಗೊಳಿಸಲಾಗಿದೆ. |
|