ಕರ್ನಾಟಕದ ಪ್ರಪ್ರಥಮ 500 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಬಳ್ಳಾರಿ ಶಾಖೋತ್ಪನ್ನ ಕೇಂದ್ರವನ್ನು ಲೋಕಸಭಾ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಸೋಮವಾರ ಉದ್ಘಾಟಿಸುವ ಮೂಲಕ ದೇಶಕ್ಕೆ ಸಮರ್ಪಿಸಿದರು.
ಸಾಂಪ್ರದಾಯಿಕ ಇಂಧನ ಮೂಲಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ವಿದ್ಯುತ್ಗೆ ಆದ್ಯತೆ ನೀಡುವ ಜತೆಗೆ 5ವರ್ಷಗಳಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈ ಮೂರುವರೆ ದಶಕಗಳಿಗೂ ಹೆಚ್ಚಿನ ಅವಧಿಯ ಹಾದಿಯಲ್ಲಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರವು ಒಂದು ಮಹತ್ವದ ನಡಿಗೆಯಾಗಿದೆ.
ಬಳ್ಳಾರಿ ನಗರದಿಂದ ಸುಮಾರು 22 ಕಿ.ಮೀ.ಗಳ ದೂರದ ಕುಡತಿನಿ ಗ್ರಾಮದ ಸಾವಿರಾರು ಎಕರೆ ಪ್ರದೇಶದಲ್ಲಿ ಬಳ್ಳಾರಿ ಶಾಖೋತ್ಪನ್ನ ಕೇಂದ್ರವು ಸ್ಥಾಪಿಸಲಾಗಿದೆ.
ವಾರ್ಷಿಕ 3504 ದಶಲಕ್ಷ ಯೂನಿಟ್ ಗಳ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕಲ್ಲಿದ್ದಲನ್ನು ವೆಸ್ಟರ್ನ್ ಕೋಲ್ ಲಿಮಿಟೆಡ್ ಕಮಾಂಡ್ ಪ್ರದೇಶದಲ್ಲಿ ಪ್ರತ್ಯೇಕ ಕಲ್ಲಿದ್ದಲ ಗಣಿ ಯೋಜನೆಯನ್ನು ಇದಕ್ಕಾಗಿ ಸಮರ್ಪಿಸಲಾಗಿದೆ. |