ದಲಿತರು ಬೌದ್ದ ಧರ್ಮಕ್ಕೆ ಮತಾಂತರ ಹೊಂದಬಾರದು ಎಂಬ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಹೇಳಿಕೆಯನ್ನು ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಆರ್ಯ ಸಮಾಜಕ್ಕೆ ದಲಿತರು ಸೇರುವುದು ಉಚಿತ ಎಂದು ಹೇಳುವ ಮೂಲಕ ಶ್ರೀಗಳು ದಲಿತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಯಾವ ಧರ್ಮದಲ್ಲಿ ಮಾನವೀಯತೆ, ಸಮಾನತೆ ಇದೆ ಎಂಬುದನ್ನು ತೋರಿಸಿ ಬೌದ್ದ ಧರ್ಮದ ಕಡೆಗೆ ನಮಗೆ ದಾರಿ ತೋರಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರ್ಣ ಪ್ರಜ್ಞಾಪೀಠದಲ್ಲಿ ಕುಳಿತು ಮಾತುಕತೆ ನಡೆಸಿದರೆ ಪ್ರಯೋಜನವಿಲ್ಲ ಮಾಗಡಿ ತಾಲೂಕು ಲಕ್ಕಸಂದ್ರ ಗ್ರಾಮದಲ್ಲಿ ಇತ್ತೀಚೆಗೆ ದಲಿತ ಮಹಿಳೆ ಗಂಗಮ್ಮ ಸವರ್ಣೀಯರ ಕೇರಿಯಲ್ಲಿ ನಲ್ಲಿ ನೀರು ಹಿಡಿದ ಕಾರಣಕ್ಕೆ ದೌರ್ಜನ್ಯ ನಡೆಸಿ ಆಕೆಗೆ 101ರೂಪಾಯಿ ದಂಡ ಹಾಕಿದರು. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳು.
ಆ ಗ್ರಾಮಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಬನ್ನಿ, ನಿಮ್ಮ ಜೊತೆ ಮಾತುಕತೆಗಿಂತ ಬಹಿರಂಗ ಚರ್ಚೆ ಸಂವಾದಕ್ಕೆ ಸದಾ ಸಿದ್ದರಿದ್ದೇವೆ ಎಂದು ದಸಂಸ ನಾಗವಾರ ಕಿಡಿಕಾರಿದ್ದಾರೆ. |