ಶೃಂಗೇರಿಯ ಬಿಜೆಪಿ ಮುಖಂಡ ರಂಗನಾಥ್ ಅವರು ಮಲೆನಾಡಿನ ಸಮಸ್ಯೆ ಕುರಿತಂತೆ ನಕ್ಸಲೀಯರ ಜತೆ ಚರ್ಚೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬಿಜೆಪಿಯ ರಂಗನಾಥ್ ಅವರನ್ನು ನಕ್ಸಲೀಯರು ಅಪಹರಿಸಿಕೊಂಡು ಹೋಗಿರುವುದಾಗಿ ದಟ್ಟ ವದಂತಿ ಹಬ್ಬಿತ್ತು, ಆದರೆ ಇದೀಗ ಅವರು ಮಂಗಳವಾರ ಮನೆಗೆ ಮರಳುವ ಮೂಲಕ ವದಂತಿಗಳಿಗೆ ತೆರೆ ಬಿದ್ದಿದೆ.
ಮಲೆನಾಡ ಸಮಸ್ಯೆಗಳ ಕುರಿತಾಗಿ ಚರ್ಚಿಸುವ ನಿಟ್ಟಿನಲ್ಲಿ ನಕ್ಸಲೀಯರೊಂದಿಗೆ ರಂಗನಾಥ್ ಹಾಗೂ ಗ್ರಾಮದ ಏಳೆಂಟು ಮುಖಂಡರು ತೆರಳಿದ್ದಾರೆನ್ನಲಾಗಿದೆ.
ಅರಣ್ಯ ಕಾಯ್ದೆ, ಗಿರಿಜನರ ಒಕ್ಕಲೆಬ್ಬಿಸುವಿಕೆ. ಅರಣ್ಯ ಉತ್ಪನ್ನ ಬಳಕೆಗೆ ಅನುಮತಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆದರೆ ಈವರೆಗೂ ರಂಗನಾಥ್ ಅವರು ಸ್ವತಃ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಆದರೆ ನಕ್ಸಲೀಯರು ಮತ್ತು ಬಿಜೆಪಿ ಎಂದರೆ ಹಾವು-ಮುಂಗುಸಿ ಇದ್ದಂತೆ, ಏತನ್ಮಧ್ಯೆ ರಂಗನಾಥ್ ಮತ್ತು ನಕ್ಸಲೀಯರ ನಡುವೆ ನಡೆದಿದೆ ಎನ್ನಲಾಗಿರುವ ಮಾತುಕತೆ ಆಶ್ಚರ್ಯ ಹುಟ್ಟಿಸಿದೆ. |