ಮೇವರಿಕ್ ಹಗರಣ ಇನ್ನೂ ಹಸಿರಾಗಿರುವಾಗಲೇ ರಾಜ್ಯ ಸರ್ಕಾರ ಇನ್ನೊಂದು ವಿವಾದ ಹುಟ್ಟು ಹಾಕಿದೆ.
ರಾಜ್ಯದ ಸಂಸ್ಕೃತಿಯ ಪ್ರತೀಕ ಎನಿಸಿರುವ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಬೆಂಗಳೂರಿನ ಯಶವಂತಪುರದಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್), ಮೈಸೂರು ಮತ್ತು ಶಿವಮೊಗ್ಗದಲ್ಲಿರುವ ಗಂಧದ ಎಣ್ಣೆ ತಯಾರಿಕಾ ಘಟಕಗಳನ್ನು ಬೇರೆಡೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಅಲ್ಲದೆ, ತೆರವಾಗುವ ಜಾಗವನ್ನು ವಾಣಿಜ್ಯ ಬಳಕೆಗೆಂದು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಯಶವಂತಪುರದಲ್ಲಿರುವ ಕಾರ್ಖಾನೆಯನ್ನು ತುಮಕೂರು ರಸ್ತೆಯ ದಾಬಸ್ ಪೇಟೆಯಲ್ಲಿ ಕಾರ್ಖಾನೆಗೆ ಸೇರಿದ 22 ಎಕರೆ ಪ್ರದೇಶಕ್ಕೆ ಸ್ಥಳಾಂತರಿಸುವುದು ಸರ್ಕಾರದ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಕಾರ್ಖಾನೆ ಸ್ಥಳಾಂತರ ಮತ್ತು ಖಾಸಗಿಗೆ ಗುತ್ತಿಗೆ ನೀಡುವ ಸಾಧಕ-ಬಾಧಕಗಳ ಬಗ್ಗೆ ಸ್ವತಃ ಕೆಎಸ್ ಡಿಎಲ್ ಸಲಹಾ ಸಂಸ್ಥೆಯೊಂದರಿಂದ ಅಧ್ಯಯನ ನಡೆಸಿ ವರದಿ ತಯಾರಿಸಿದೆ.
ಈ ಬೆಳವಣಿಗೆಯ ಬಗ್ಗೆ ಜೆಡಿಎಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಟ್ಟ ಭದ್ರ ಹಿತಾಸಕ್ತಿಗಳಿಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಕಾರ್ಖಾನೆ ಜಮೀನು ನೀಡುವ ಉದ್ದೇಶದಿಂದ ಇಡೀ ಕಾರ್ಖಾನೆಯನ್ನೇ ದಾಬಸ್ ಪೇಟೆಗೆ ಸ್ಥಳಾಂತರ ಮಾಡಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದೆ.
ಆದರೆ ಈ ಕುರಿತ ಮಾಹಿತಿಯನ್ನು ತಳ್ಳಿ ಹಾಕಿರುವ ಸಚಿವ ನಿರಾಣಿ, ಕಾರ್ಖಾನೆಯನ್ನು ಸ್ಥಳಾಂತರ ಮಾಡುವ ಬಗ್ಗೆ ಅಧಿಕಾರಿ ಮಟ್ಟದಲ್ಲಾಗಲೀ ಅಥವಾ ಸರ್ಕಾರದ ಮಟ್ಟದಲ್ಲಾಗಲೀ ಯಾವುದೇ ಚಿಂತನೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |