ವಿಧಾನಪರಿಷತ್ತಿನ 3 ಸ್ಥಾನಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಭ್ರಮನಿರಸನಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಆರ್.ವಿ. ದೇಶಪಾಂಡೆ ಅವರು, ಬಿಜೆಪಿಯನ್ನು ಸೋಲಿಸುವುದೇ ಪ್ರಮುಖ ಗುರಿ ಎಂದಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕದ ಮೊದಲ ಚುನಾವಣೆಯಲ್ಲಿಯೇ ಸೋಲು ಕಂಡಿರುವುದು 'ಪ್ರಥಮ ಚುಂಬನಂ ದಂತಭಗ್ನಂ' ಎಂಬಂತಾಗಿದೆ ಎಂದು ಲೇವಡಿ ಮಾಡಿದರು.ರಾಜ್ಯಾದ್ಯಂತ ಜನತೆ ಬಿಜೆಪಿ ಕಾರ್ಯಕ್ರಮಗಳ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರಂತೆ ಮುಂದೆಯೂ ರಾಜ್ಯದ ಜನತೆಯೊಂದಿಗೆ ಬಿಜೆಪಿ ಸದಾಕಾಲ ಇರುತ್ತದೆ ಎಂದು ಅವರು ತಿಳಿಸಿದರು.ಬೆಲೆ ಏರಿಕೆ, ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಜನಮನ್ನಣೆ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಲೋಕಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆ ಮುಂದಾಗಬೇಕೆಂದು ಅವರು ಆಗ್ರಹಿಸಿದರು. |
|