ಬೆಂಗಳೂರು: ಹಣ,ಆಮೀಷ ಒಡ್ಡಿ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರೀರಾಮನ ಮೇಲೆ ಆಣೆ (ಪ್ರಮಾಣ) ಮಾಡಿ ಉತ್ತರ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಆಪರೇಷನ್ ಕಮಲದ ಮೂಲಕ ಜನಪ್ರತಿನಿಧಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುವಾಗ ಅವರಿಗೆ ಹಣ ಕೊಟ್ಟಿಲ್ಲ ಮತ್ತು ವಿಧಾನಪರಿಷತ್ ಚುನಾವಣೆ ವೇಳೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿಗಳು ಶ್ರೀರಾಮನ ಮೇಲೆ ಪ್ರಮಾಣ ಮಾಡಿದಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಅವರು, ಶ್ರೀರಾಮನ ಮೇಲೆ ಭಕ್ತಿ, ನಂಬಿಕೆ ಇದ್ದರೆ ಅವರು ಆಣೆ ಮಾಡಿ ಹೇಳಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು.
ಖರೀದಿ ರಾಜಕೀಯದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. |