ಹೊಗೇನಕಲ್ ವಿವಾದ ಮತ್ತೆ ಜೀವ ತಳೆದಿದ್ದು, ಈ ವಿವಾದವನ್ನು ಕೆದಕಲು ಯತ್ನಿಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರು ಇದರಿಂದ ಸಂಭವಿಸಬಹುದಾದ ಅನಾಹುತಕ್ಕೆ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಹಿನ್ನೆಲೆಯಲ್ಲಿ ವೇದಿಕೆ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯಾವ ತ್ಯಾಗಕ್ಕೂ ಸಿದ್ದ ಎಂದು ಹೇಳಿದರು.ಹೊಗೇನಕಲ್ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಟೆಂಡರ್ ಪ್ರಕ್ರಿಯೆ ನೆಪದಲ್ಲಿ ತಮಿಳುನಾಡು ಮತ್ತೆ ಕಾಮಗಾರಿಗೆ ಕೈ ಹಾಕದಲ್ಲಿ, ಆಗುವ ಸಾವು-ನೋವಿಗೆ ಕರುಣಾನಿಧಿಯೇ ಹೊಣೆಯಾಗಬೇಕಾಗುತ್ತದೆ ಎಂದರು.ರಾಜಕೀಯಕೋಸ್ಕರ ಹೊಗೇನಕಲ್ ವಿವಾದವನ್ನು ಬಳಸಿಕೊಳ್ಳಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ರಾಜ್ಯದ ವಿರುದ್ಧ ನಡೆಯುತ್ತಿರುವ ಇಂಥ ಕೃತ್ಯಗಳಿಗೆ,ರಾಜ್ಯದ ಭ್ರಷ್ಟ ರಾಜಕೀಯ ಮುಖಂಡರೇ ಕಾರಣ ಎಂದು ಆರೋಪಿಸಿದರು. |
|