ಹಾಲಿನ ದರದ ಕುರಿತಾದ ಕೆಎಂಎಫ್ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಇದೀಗ ಮತ್ತೊಂದು ರೂಪ ಪಡೆದುಕೊಂಡಿದೆ. ಮತ್ತೊಮ್ಮೆ ಲೆಕ್ಕ ಪರಿಶೋಧನೆ ನಡೆಸಲು 21 ಮಂದಿ ಅಧಿಕಾರಿಗಳಿರುವ ದೊಡ್ಡ ತಂಡವನ್ನೇ ಸರ್ಕಾರ ಕೆಎಂಎಫ್ ಗೆ ಕಳುಹಿಸಿದೆ.
ಈ ಸಂಬಂಧ ಗುರುವಾರ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಸಹಕಾರ ಇಲಾಖೆಯ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸಿದ್ದರು.
ಹಾಲಿನ ದರ ನಿಗದಿ ಕುರಿತಂತೆ ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ಕೆಎಂಎಫ್ ನಡುವಿನ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೆ ದೇವೇಗೌಡರ ಕುಟುಂಬ ಹಾಗೂ ಕೆಎಂಎಫ್ ಅಧ್ಯಕ್ಷ ರೇವಣ್ಣ ವಿರುದ್ಧ ಹಗೆ ತೀರಿಸಿಕೊಳ್ಳಲು ಸರ್ಕಾರ ಈ ರೀತಿ ನಡೆಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಆರೋಪ ಮಾಡಿತ್ತು.
ಅಲ್ಲದೆ, ಈ ಕುರಿತಂತೆ ಕೆಎಂಎಫ್ ಅಧ್ಯಕ್ಷ ರೇವಣ್ಣ, ಹಾಲು ಬೆಲೆ ಏರಿಕೆ ಸಂಬಂಧ ಸರ್ಕಾರಕ್ಕೆ 10 ದಿನಗಳ ಗಡುವು ನೀಡಿದ್ದರು. ಇದೀಗ ಲೆಕ್ಕ ಪರಿಶೋಧನೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ. |