ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಬೇಡಿ ಎಂದು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಡಾ. ಅಂಬೇಡ್ಕರ್ ಪರಿನಿರ್ಮಾಣ ಹೊಂದಿದ ದಿನವಾದ ಡಿ.6ರಂದು ದಲಿತ ಸಮುದಾಯದವರೊಂದಿಗೆ ಕುಳಿತು ಸಹಭೋಜನ ಮಾಡಲಿ ಎಂದು ಡಾ. ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಸವಾಲು ಹಾಕಿದೆ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶೂದ್ರರಿಗೆ ಮತ್ತು ದಲಿತರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡುವ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಹಿಂದೂಗಳು, ದಲಿತರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತೆ ಗೌರಿ ಲಂಕೇಶ್, ಹಿಂದೂಗಳೆಲ್ಲಾ ಒಂದೇ ಎಂದು ಹೇಳುವ ಪೇಜಾವರ ಶ್ರೀಗಳು ಎಷ್ಟು ಬ್ರಾಹ್ಮಣೇತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ, ಉಡುಪಿ ಶ್ರೀಕೃಷ್ಣ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು, ವಾಸ್ತವ ಹೀಗಿದ್ದರೂ, ನೀವು ಅದನ್ನು ನಿಮ್ಮ ಸ್ವಂತ ಆಸ್ತಿ ಎಂಬಂತೆ ಪ್ರತಿಪಾದಿಸುತ್ತಿದ್ದೀರಿ. ನಿಮಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ದಲಿತರೊಬ್ಬರನ್ನು ಅರ್ಚಕರನ್ನಾಗಿ ನೇಮಿಸಿ ಎಂದು ಸವಾಲು ಹಾಕಿದರು. |