ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಕಾಂಗ್ರೆಸ್ ನಾಯಕಿ ಮಾರ್ಗೆರೇಟ್ ಆಳ್ವಾ ಅವರ ಹೇಳಿಕೆಯನ್ನು ಹಿರಿಯ ಕಾಂಗ್ರೆಸ್ ಧುರೀಣ ಹಾಗೂ ಸಂಸದ ಆರ್.ಎಲ್. ಜಾಲಪ್ಪ ಬೆಂಬಲಿಸಿ, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಆಳ್ವ ಹೇಳಿಕೆಯನ್ನು ನಾನು ಅನುಮೋದಿಸುತ್ತೇನೆ. ಸತ್ಯ ಹೇಳಿದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲ ಅವರ ಹೇಳಿಕೆಯಲ್ಲಿ ಸತ್ಯ ಎಷ್ಟಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಜಾಲಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯ ಹೇಳಿದ ಮಾರ್ಗರೇಟ್ ಆಳ್ವ ವಿರುದ್ಧ ಶಿಸ್ತು ಕ್ರಮಕ್ಕಾಗಿ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಿಂತಲೂ ಮೊದಲು ಅವರ ಹೇಳಿಕೆಯಲ್ಲಿ ಸತ್ಯ ಎಷ್ಟಿದೆ ಎಂಬುದನ್ನು ಕಂಡುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಅದಕ್ಕೂ ಮೊದಲು ಸತ್ಯಾಸತ್ಯತೆ ಯಾವುದು ಎಂಬುದನ್ನು ಬಹಿರಂಗಪಡಿಸಲಿ. ಆ ಬಳಿಕ ಶಿಸ್ತುಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದು ಅವರು ತಿಳಿಸಿದರು.
ಮೊಯ್ಲಿ ಎಚ್ಚರಿಕೆ ಏತನ್ಮಧ್ಯೆ, ಆಳ್ವ ಹೇಳಿಕೆ ಕುರಿತು ಯಾರೂ ಪ್ರತಿಕ್ರಿಯೆ ನೀಡಬಾರದೆಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪಕ್ಷದ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು. ಆಳ್ವಾ ಪರ ಮತ್ತು ವಿರೋಧವಾಗಿ ಮಾತನಾಡುವುದು ಆಂತರಿಕ ಶಿಸ್ತು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. |