ಆಪರೇಷನ್ ಕಮಲವನ್ನು ಮತ್ತೆ ಮುಂದುವರಿಸುವ ಕುರಿತು ಬಿಜೆಪಿ ಚಿಂತನೆ ನಡೆಸಿದ್ದು, ವಲಸಿಗರಿಗೆ ಅವಕಾಶ ಕಲ್ಪಿಸುವುದಕ್ಕಾಗಿ ಪಕ್ಷದ ಕಾರ್ಯಕರ್ತರು ಇನ್ನಷ್ಟು ತ್ಯಾಗಕ್ಕೆ ಸಿದ್ಧರಾಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಸ್ಥಿರ ಸರ್ಕಾರ ಸ್ಥಾಪನೆಗೆ ಈ ಕಾರ್ಯಾಚರಣೆ ಪಕ್ಷಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಪಕ್ಷದ ಸಿದ್ದಾಂತದ ಮೇಲೆ ನಂಬಿಕೆಯಿಟ್ಟು ಬೇರೆ ಪಕ್ಷಗಳಿಂದ ತಾವಾಗಿಯೇ ಬರುವವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಹಾಗಾಗಿ ವಲಸಿಗರನ್ನು ಗೌರವದಿಂದ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದು ಅವರು ಹೇಳಿದರು.
ಈ ಕಾರ್ಯಾಚರಣೆ ಕುರಿತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿಲ್ಲ. ಪ್ರಾತಿನಿಧ್ಯಕ್ಕಿಂತ ತಂತ್ರಗಾರಿಕೆ ಮುಖ್ಯ ಎಂದು ಅವರು ತಿಳಿಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ರಾಜ್ಯದ ಬಹುತೇಕ ನಿಗಮ-ಮಂಡಳಿಗಳು ವಲಸಿಗರ ಪಾಲಾಗುವ ಸಾಧ್ಯತೆಯನ್ನು ಸದಾನಂದಗೌಡ ದೃಢಪಡಿಸಿದ್ದಾರೆ.
ಕಾರ್ಯಾಕಾರಿಣಿ ಸಭೆ:
ಡಿ. 7ರಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೈಗೊಳ್ಳಲಾಗುವ ನೀತಿ, ನಿರ್ಧಾರದ ಮೇಲೆ ಮುಂದಿನ ಚುನಾವಣೆ ನಡೆಯಲಿದೆ. ಅಂತೆಯೇ, 8ರಂದು ಜಿಲ್ಲಾ ಘಟಕಗಳ ಸಭೆಯನ್ನೂ ಹುಬ್ಬಳ್ಳಿಯಲ್ಲೇ ಆಯೋಜಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. |