ಕೆಎಂಎಫ್ ಹಾಗೂ ಸರ್ಕಾರದ ನಡುವಿನ ಜಟಾಪಟಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ಇದೀಗ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಇನ್ನೊಂದು ಪ್ರಕರಣವನ್ನು ಸರ್ಕಾರ ಹುಟ್ಟು ಹಾಕಿದೆ.ಜೆಡಿಎಸ್-ಕಾಂಗ್ರೆಸ್ ಆಳ್ವಿಕೆಯಲ್ಲಿ ಇಂಧನ ಸಚಿವರಾಗಿದ್ದ ಎಚ್.ಡಿ. ರೇವಣ್ಣನವರು ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿರುವ ಸರ್ಕಾರ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿದೆ.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಐದು ವಿದ್ಯುತ್ ಸರಬರಾಜು ಕಂಪೆನಿಗಳು ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 12,321 ಮಂದಿ ನೇಮಕಾತಿಯಲ್ಲಿ ಆಗಿರುವ ವ್ಯಾಪಕ ಲೋಪ ಹಾಗೂ ಅಕ್ರಮಗಳ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.ರೇವಣ್ಣ ಸಚಿವರಾಗಿದ್ದ ನೇಮಕಾತಿಗಳಲ್ಲಿ ಪಕ್ಷಪಾತ, ಅಕ್ರಮ ಮತ್ತು ಲೋಪದೋಷ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ನೇಮಕಾತಿ ಪ್ರಕರಣಗಳ ಬಗ್ಗೆ ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಕಲಂ 7 (2ಎ) ಅಡಿಯಲ್ಲಿ ಲೋಕಾಯುಕ್ತರಿಗೆ ಪ್ರಕರಣ ಒಪ್ಪಿಸಲು ಸರ್ಕಾರ ತೀರ್ಮಾನಿಸಿದೆ. ಇದರೊಂದಿಗೆ ರೇವಣ್ಣ ಹಾಗೂ ರಾಜ್ಯ ಸರ್ಕಾರದ ನಡುವಿನ ಸಮರ ತಾರಕ್ಕಕ್ಕೇರಿದೆ. |