ಆಪರೇಶನ್ ಕಮಲ, ಕೆಎಂಎಫ್ ಜಟಾಪಟಿಯ ನಡುವೆಯೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇರಳದ ದೇವಾಲಯವೊಂದಕ್ಕೆ ಆನೆಯನ್ನು ದಾನ ನೀಡುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಇತ್ತೀಚೆಗಷ್ಟೇ ಯಡಿಯೂರಪ್ಪ ಅವರು ಕೇರಳದ ಕಣ್ಣೂರು ರಾಜರಾಜೇಶ್ವರ ದೇವಾಲಯಕ್ಕೆ ಆನೆಯನ್ನು ದಾನವಾಗಿ ನೀಡಿದ್ದರು. ಏತನ್ಮಧ್ಯೆ ಪೂರ್ವಾನುಮತಿ ಇಲ್ಲದೆ ಆನೆಯ ಕಳ್ಳಸಾಗಾಣಿಕೆ ಮಾಡಿದ್ದಾರೆ ಎಂದು ಆರೋಪಿಸಿ ವನ್ಯಜೀವಿ ಕಾಯ್ದೆಗಳ ಉಲ್ಲಂಘನೆಯಡಿಯಲ್ಲಿ ಕೇರಳದ ಆನೆ ಪ್ರೇಮಿಗಳ ಸಂಘ ಕರ್ನಾಟಕದ ಲೋಕಾಯುಕ್ತರಿಗೆ ಯಡಿಯೂರಪ್ಪ ವಿರುದ್ದ ದೂರು ನೀಡಿದೆ.
ಯಡಿಯೂರಪ್ಪ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಕೇರಳ ಆನೆ ನಿರ್ವಹಣೆ ಕಾಯ್ದೆ 2003ನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಸಂಘ, ಕಾಯ್ದೆಗಳ ಉಲ್ಲಂಘನೆಗಾಗಿ ಮುಖ್ಯಮಂತ್ರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. |