ಕೆಎಂಎಫ್ ವ್ಯವಹಾರಗಳ ತನಿಖೆಗೆ ಆದೇಶಿಸಿರುವ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಯಾವ ನಿಯಮ ಆಧರಿಸಿ ತನಿಖೆಗೆ ಆದೇಶಿಸಲಾಗಿದೆ. ಈ ಆದೇಶವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ ನ್ಯಾ.ಕೆ.ಎಲ್. ಮಂಜುನಾಥ್ ಅವರಿದ್ದ ಏಕ ಸದಸ್ಯ ಪೀಠ, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ನ. 3 ರಂದು ಮುಖ್ಯಮಂತ್ರಿ ಸಚಿವಾಲಯ ಸಹಕಾರಿ ಇಲಾಖೆ ರಿಜಿಸ್ಟ್ರಾರ್ಗೆ ಆದೇಶವೊಂದನ್ನು ನೀಡಿ, ಕೆಎಂಎಫ್ನ 2001 ರಿಂದ 2007ರವರೆಗಿನ ಪರಿಶೋಧಿತ ಲೆಕ್ಕಗಳನ್ನು ಮರು ಪರಿಶೀಲನೆ ಮಾಡುವಂತೆ ಸೂಚಿಸಿತ್ತು.
ಈ ಆದೇಶದ ಅನ್ವಯ ನ. 5ರಂದು ಸಹಕಾರ ಇಲಾಖೆಯ 21 ಅಧಿಕಾರಿಗಳ ತಂಡವನ್ನು ಪರಿಶೋಧಿತ ಲೆಕ್ಕಗಳ ಮರು ಪರಿಶೀಲನೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಿತ್ತು.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಕೆಎಂಎಫ್ ಅಧ್ಯಕ್ಷ ಹಾಗೂ 9 ಮಂದಿ ನಿರ್ದೇಶಕರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಈ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.
ಸರ್ಕಾರ ಕೆಎಂಎಫ್ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ ನಿಯಮವೇ ಸರಿ ಇಲ್ಲ ಎಂದು ಅರ್ಜಿದಾರರ ಪರ ವಕೀಲ ಜಯಕುಮಾರ್ ಎಸ್.ಪಾಟೀಲ್ ವಾದಿಸಿದ್ದಾರೆ. ಸರ್ಕಾರಕ್ಕೆ ನಿಯಮ 63(10) ರಡಿಯಲ್ಲಿ ತನಿಖೆ ನಡೆಸಲು ಅಧಿಕಾರವಿದೆ. ಆದರೆ ಇಲ್ಲಿ ಸರ್ಕಾರ 63(11)ರಡಿಯಲ್ಲಿ ಆದೇಶ ಹೊರಡಿಸಿದೆ ಎಂದು ಅವರು ವಾದಿಸಿದ್ದಾರೆ. |