ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ ಸರ್ಕಾರಿ ಗುತ್ತಿಗೆ ವೈದ್ಯಾಧಿಕಾರಿಗಳ ವರ್ತನೆಗೆ ಹೈಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.ಜನರೇ ನೀಡಿರುವ ಹಣದಲ್ಲಿ ವೈದ್ಯಾಧಿಕಾರಿಗಳಾಗಿರುವ ನೀವು, ಬಡರೋಗಿಗಳ ಶುಶ್ರೂಷೆಯನ್ನೂ ಮಾಡದೇ ನಿರಂತರ ಮುಷ್ಕರ ನಡೆಸಿದ ಕ್ರಮಕ್ಕೆ ಹೈಕೋರ್ಟ್ ಮಂಗಳಾರತಿ ಮಾಡಿದೆ.ಕಾನೂನು ಉಲ್ಲಂಘಿಸಿ ಮುಷ್ಕರದಲ್ಲಿ ಭಾಗಿಯಾಗಿರುವ ವೈದ್ಯರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುವಂತೆ ಕೋರಿ ವಕೀಲ ಎಸ್.ವಾಸುದೇವ ಮತ್ತು ಬಿ.ಕೃಷ್ಣ ಭಟ್ಟ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.ಇಂದು ಬೆಳಿಗ್ಗೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನೊಳಗೊಂಡ ವಿಭಾಗೀಯ ಪೀಠ, ವೈದ್ಯರ ಮುಷ್ಕರದ ಕ್ರಮವನ್ನು ಖಾರವಾಗಿ ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿದೆ.ಅಲ್ಲದೇ ವೈದ್ಯಾಧಿಕಾರಿಗಳು ನಡೆಸಿದ ಮುಷ್ಕರದ ವಿರುದ್ಧ ಏನು ಕ್ರಮಕೈಗೊಳ್ಳುತ್ತೀರಿ ಎಂದು ವಿವರ ನೀಡುವಂತೆ ಹೈಕೋರ್ಟ್ ಹತ್ತು ದಿನಗಳ ಗಡುವು ವಿಧಿಸಿ ರಾಜ್ಯ ಸರ್ಕಾರ ಮತ್ತು ಭಾರತೀಯ ವೈದ್ಯ ಸಂಘಕ್ಕೆ ನೋಟಿಸ್ ಜಾರಿ ಮಾಡಿದೆ.ಗುರುವಾರ ನಡೆಸಿದ ಮಾತುಕತೆಯಿಂದಾಗಿ ವೈದ್ಯರು ಮುಷ್ಕರವನ್ನು ಹಿಂತೆಗೆದುಕೊಂಡಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವಂತೆ ಸರ್ಕಾರ ಮನವಿ ಮಾಡಿಕೊಂಡಿತ್ತಾದರೂ, ನ್ಯಾಯಾಲಯ ಇದೊಂದು ಗಂಭೀರ ವಿಷಯವಾಗಿದ್ದರಿಂದ ಅರ್ಜಿಯನ್ನು ವಜಾಗೊಳಿಸುವುದಿಲ್ಲ ಎಂದು ಹೇಳಿತ್ತು. |