ದೇಶದ ಎರಡನೇ ಅತಿ ದೊಡ್ಡ ಬೆಂಗಳೂರು ಪುಸ್ತಕೋತ್ಸವವನ್ನು ಶುಕ್ರವಾರ ಗೃಹ ಸಚಿವ ವಿ.ಎಸ್.ಆಚಾರ್ಯ ಉದ್ಘಾಟಿಸಿ, ದೇಶದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವನ್ನು ರಾಜ್ಯದಲ್ಲಿ ಆಯೋಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದು ಜನತೆಯಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದರು.ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಪುಸ್ತಕೋತ್ಸವಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವನ್ನು ನೀಡಲಿದೆ ಎಂದು ಅವರು ಹೇಳಿದರು.ಈ ಹಿಂದೆ ಪುಸ್ತಕಗಳ ಸಂಖ್ಯೆ, ಪ್ರಕಾಶರ ಸಂಖ್ಯೆ ಕಡಿಮೆ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಲವು ಪ್ರಕಾಶಕರು ಉತ್ತಮ ಪುಸ್ತಕಗಳ ಪ್ರಕಟಣೆ ಕಾರ್ಯ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಗೃಹ ಸಚಿವರು ಪುಸ್ತಕೋತ್ಸವಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡಿರುವ 3.25 ಲಕ್ಷ ರೂಪಾಯಿ ಹಣದ ನೆರವಿನ ಚೆಕ್ ಅನ್ನು ಪುಸ್ತಕ ಮೇಳದ ಆಯೋಜಕರಿಗೆ ಹಸ್ತಾಂತರಿಸಿದರು.ವಿವಿಧ ಭಾಷಾ ಕವಿ ಲೇಖಕರೊಡನೆ ಪ್ರತಿದಿನವೂ ಅಪರೂಪದ ಸಂವಾದ ಈ ಬಾರಿ ಪುಸ್ತಕೋತ್ಸವದಲ್ಲಿ ಕನ್ನಡ ಸಾಹಿತಿಗಳಷ್ಟೇ ಅಲ್ಲದೇ ಹಿರಿಯ ಬಂಗಾಲಿ ಲೇಖಕರು, ಮಣಿಪುರದ ಕವಯತ್ರಿ, ಮಲೆಯಾಳಂ ಭಾಷೆಯ ಸಾಹಿತಿ, ಮರಾಠಿಯ ಜನಪ್ರಿಯ ಕಾದಂಬರಿಗಾರರು, ತಮಿಳು ಭಾಷೆಯ ಪ್ರಾಜ್ಞರು ಅನುದಿನವು ಬೆಂಗಳೂರು ಪುಸ್ತಕೋತ್ಸವದಲ್ಲಿ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷತೆ.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ವಹಿಸಿದ್ದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪುಸ್ತಕೋತ್ಸವವನ್ನು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕ್ಲಬ್ ಕ್ಲಾಸ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. |