ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ನನ್ನ ಮಕ್ಕಳ ವಿರುದ್ಧ ಸೇಡಿನ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಲವತ್ತುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಅವರು ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಣಯಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಹೊರಟಿರುವುದು ಸೇಡಿನ ರಾಜಕಾರಣ ಎಂದು ಅವರು ಆಪಾದಿಸಿದರು.
ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷ ಹೊರ ತಂದಿರುವ ಬಿಜೆಪಿ ಸಖ್ಯ ಮತ್ತು ತರುವಾಯ ಪ್ರಮಾದವೇ, ಪ್ರಾಯಶ್ಚಿತ್ತವೇ ಒಂದು ಪ್ರಾಂಜಲ ಅವಲೋಕನ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಲೋಕಾಯುಕ್ತ ತನಿಖೆ ಸಂಬಂಧ ನೋಟಿಸ್ ಬಂದರೆ ಕುಮಾರಸ್ವಾಮಿಯಾಗಲಿ, ರೇವಣ್ಣ ಆಗಲಿ ಹೆದರಬೇಕಿಲ್ಲ ಲೋಕಾಯುಕ್ತರ ಮುಂದೆ ಹಾಜರಾಗಿ ಸತ್ಯಾಸತ್ಯತೆ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ತಾವು ಅವರಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು. |