ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಮಗೆ ಗೌಡರ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಸೋಮವಾರ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ಮಾಡಿರುವ ದ್ರೋಹಗಳ ಕುರಿತು ಮಾಧ್ಯಮದವರೊಂದಿಗೆ ಹೇಳಿಕೊಂಡ ಬೆನ್ನಲ್ಲೆ ಮೂರು ಕೊಲೆ ಬೆದರಿಕೆಗಳು ಬಂದಿರುವುದಾಗಿ ತಿಳಿಸಿದ್ದಾರೆ.
ದೇವೇಗೌಡರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜೆಡಿಎಸ್ನಿಂದ ರಾಮಕೃಷ್ಣ ಹೆಗಡೆ ಅವರ ಉಚ್ಛಾಟನೆಗೆ ತಾವು ಕಾರಣರಲ್ಲ ಎಂದು ಹೇಳಿದ್ದಾರೆ. ಆದರೆ ದೇವೇಗೌಡರೇ ಕಾರಣ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದು ಅವರು ತಿಳಿಸಿದ್ದಾರೆ.
ದೇವೇಗೌಡರು ಸದಾ ದುಷ್ಟ ಶಕ್ತಿಗಳ ಪ್ರಯೋಗ ಮಾಡುತ್ತಿರುತ್ತಾರೆ ಎಂದು ಲೇವಡಿ ಮಾಡಿದ ಬಚ್ಚೇಗೌಡ, ಅವರ ವಶೀಕರಣಕ್ಕೆ ಕುಮಾರಸ್ವಾಮಿ ಬಲಿಯಾಗಿರುವುದಾಗಿ ಗಂಭೀರವಾಗಿ ದೂರಿದರು. |