ಭಾರತೀಯ ಜನತಾ ಪಕ್ಷದ ಮೇಲೆ ಜನರು ವಿಶ್ವಾಸ ಹೊಂದಿದ್ದಾರೆ, ಆದರೆ ಜನ ಜೆಡಿಎಸ್ ಅನ್ನು ಕೈ ಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಟಿವಿ9 ಚಾನೆಲ್ ಜತೆ ಮಾತನಾಡಿದ ಅವರು, ರಾಜ್ಯದ ಜನ ನಾವು ಮಾಡಿದ ಒಳ್ಳೇಯ ಕೆಲಸವನ್ನು ಗುರುತಿಸಿ ನಮ್ಮನ್ನು ಆಶೀರ್ವದಿಸಿದ್ದಾರೆ. ಜೆಡಿಎಸ್ ಮಾಡಿದ ವಿಶ್ವಾಸ ದ್ರೋಹಕ್ಕೆ ಜನರೇ ಪಶ್ಚಾತ್ತಾಪಪಟ್ಟು ಅಧಿಕಾರದ ಗದ್ದುಗೆ ಏರಿಸಿದ್ದಾರೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ದೇವೇಗೌಡರು ಹಳೇ ಕಥೆಗಳನ್ನು ಹೇಳುತ್ತ ಇರುವುದರಲ್ಲಿ ಯಾವುದೇ ಅರ್ಥವಿಲ್ಲ, ಸೋಲು, ಹತಾಸೆಗಳಿಂದ ಕಂಗಾಲಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದಕ್ಕೆ ತಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಈ ಸಂದರ್ಭದಲ್ಲಿ ನುಡಿದರು.
ಅಲ್ಲದೇ ಎಷ್ಟು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಿ ಅಂತ ನೋಡುತ್ತೇನೆ ಎಂದು ದೇವೇಗೌಡರು ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಷ್ಟು ದಿನ ಅಧಿಕಾರದಲ್ಲಿ ಇರಬೇಕು, ಬೇಡ ಎಂಬುದನ್ನು ತೀರ್ಮಾನಿಸುವುದು ಈ ರಾಜ್ಯದ ಜನರೇ ವಿನಃ ದೇವೇಗೌಡರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಗಾದಿ ಶಾಶ್ವತ ಅಂತ ನಾನೆಂದೂ ಹೇಳಿಲ್ಲ, ಗೌಡರು ಭ್ರಾಂತಿಗೆ ಒಳಗಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. |