ಸಾವಿರಾರು ಕೋಟಿ ರೂ.ಗಳ ಹಗರಣದ ರೂವಾರಿ ವಿನಿವಿಂಕ್ ಶಾಸ್ತ್ರೀಯ ಜಾಮೀನು ಅರ್ಜಿಯನ್ನು ಸೋಮವಾರ ಹೈಕೋರ್ಟ್ನ ಏಕಸದಸ್ಯ ಪೀಠ ತಿರಸ್ಕರಿಸಿದೆ.
ವಿನಿವಿಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ವಿನಿವಿಂಕ್ ಶಾಸ್ತ್ರಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. 20,184 ಠೇವಣಿದಾರರಿಂದ 203 ಕೋಟಿ ರೂ. ಸಂಗ್ರಹಿಸಿದ್ದಾರೆ ಎಂದು ವಿನಿವಿಂಕ್ ಶಾಸ್ತ್ರಿ ಪರ ವಾದ ಮಂಡಿಸಿದ ವಕೀಲರ ಕೋರ್ಟ್ಗೆ ತಿಳಿಸಿದರು. ಅದರಲ್ಲಿ 183 ಕೋಟಿ ರೂ.ಗಳನ್ನು ಈಗಾಗಲೇ ಹಿಂದಿರುಗಿಸಿದ್ದಾರೆ. 10 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದರು.
ಅಲ್ಲದೆ, 19 ಕೋಟಿ ರೂ.ಗಳನ್ನು ಠೇವಣಿದಾರರಿಗೆ ಬಂಧನಕ್ಕೂ ಮುಂಚೆ ಹಿಂದಿರುಗಿಸಿದ್ದಾರೆ. ವಿನಿವಿಂಕ್ ಶಾಸ್ತ್ರಿಗೆ ಜಾಮೀನು ನೀಡಿದರೆ ದೇಶಬಿಟ್ಟು ಹೋಗಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ 400 ಕೋಟಿ ರೂ.ಗಳ ಭದ್ರತೆ ಕೊಟ್ಟಿದ್ದಾರೆ ಎಂದು ವಾದ ಮಂಡಿಸಿದರು.
ಆದರೆ ಈ ಸಂದರ್ಭದಲ್ಲಿ ಸರ್ಕಾರಿ ವಕೀಲರು ಹೊಸದಾಗಿ ಆಕ್ಷೇಪ ಅರ್ಜಿ ಸಲ್ಲಿಸಿ ಜಾಮೀನು ನೀಡದಂತೆ ವಾದ ಮಂಡಿಸಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ವಿನಿವಿಂಕ್ ಶಾಸ್ತ್ರಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. |