ಉಪಚುನಾವಣೆಯ ಹಿನ್ನೆಲೆಯಾಗಿ ಇಟ್ಟುಕೊಂಡು ಹಣ ಹಂಚಿದ್ದೇ ಮಾಜಿ ಸಚಿವ ಚೆನ್ನಿಗಪ್ಪ ಅವರ ಮೇಲೆ ಹಲ್ಲೆ ನಡೆಯಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಸಂಜೆ ಆಸ್ಪತ್ರೆಯತ್ತ ತೆರಳುತ್ತಿದ್ದ ಮಾಜಿ ಸಚಿವ ಚೆನ್ನಿಗಪ್ಪ ಅವರ ಕಾರನ್ನು ತಡೆದು ಜೆಡಿಎಸ್ ಕಾರ್ಯಕರ್ತರು ಚೆನ್ನಾಗಿ ಥಳಿಸಿದ್ದರು.
ಈ ಪ್ರಕರಣದ ಕುರಿತು ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡುತ್ತಾ, ಚೆನ್ನಿಗಪ್ಪ ಅವರು ಮಧುಗಿರಿ ಕ್ಷೇತ್ರದಲ್ಲಿ ಹಣ ಹಂಚಿದ್ದೇ ಅವರ ಮೇಲೆ ಹಲ್ಲೆ ನಡೆಯಲು ಕಾರಣ ಎಂದು ಹೇಳಿದ್ದಾರೆ. ಆದರೆ ಹಲ್ಲೆ ನಡೆಸಿದವರು ಯಾರು ಎಂಬುದು ನನಗಿಂತ ಚೆನ್ನಾಗಿ ಚೆನ್ನಿಗಪ್ಪನವರಿಗೆ ತಿಳಿದಿರಬೇಕು. ಯಾಕೆಂದರೆ ಹಲ್ಲೆ ನಡೆಸಿದವರು ಅವರ ಕ್ಷೇತ್ರದ ಜನರೇ ಆಗಿದ್ದಾರೆ ಎಂದರು.
ಅಲ್ಲದೇ ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಚ್ಚೇಗೌಡರ ಕುರಿತು ಮಾತನಾಡಿದ ಅವರು, ಬಚ್ಚೇಗೌಡರಿಗೆ ಬುದ್ದಿ ಭ್ರಮಣೆಯಾಗಿದ್ದರಿಂದ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. |