ಜೆಡಿಎಸ್ ನಗರದಲ್ಲಿ ಆಯೋಜಿಸಿದ ಸಮಾವೇಶ ಸಂದರ್ಭದಲ್ಲಿ ಉಂಟಾದ ಟ್ರಾಫಿಕ್ ಜಾಮ್ನಿಂದ ಅನುಭವಿಸಿದ ನರಕಯಾತನೆಗೆ ಬೆಂಗಳೂರಿಗರು ಅತಿಯಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಸಂಚಾರ ವ್ಯವಸ್ಥೆಯ ಗೊಂದಲಕ್ಕೆ ಅಧಿಕಾರಿಗಳೇ ಕಾರಣ. ನಾನು ನಗರ ಪೊಲೀಸ್ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಿದ್ದೇನೆ. ಕಾರ್ಯಕ್ರಮದ ವಿವರಗಳನ್ನು ತಿಳಿಸಿ ಅಗತ್ಯ ಪೊಲೀಸರನ್ನು ನಿಯೋಜಿಸಲು ಶುಲ್ಕವನ್ನೂ ನೀಡಿದ್ದೇನೆ. ಆದರೆ ಅವರು ಕ್ರಮ ಕೈಗೊಳ್ಳಲಿಲ್ಲ. ಈ ಎಲ್ಲ ಗೊಂದಲಗಳಿಗೆ ಸರ್ಕಾರವೇ ಹೊಣೆ' ಎಂದರು.
ಅರಮನೆ ಮೈದಾನದಲ್ಲಿ ರಾಲಿ ಮಾಡಿದವರು ನಾವು ಮಾತ್ರ ಅಲ್ಲ. ಬಿಜೆಪಿ ಕೂಡಾ ಇಲ್ಲಿ ಸಮಾವೇಶ ಮಾಡಿತ್ತು. ಇದರಿಂದಲೂ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಕ್ ಸಂಗೀತ ನಡೆದಾಗಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಆದರೆ ಯಾರೊಬ್ಬರು ಮಾತನಾಡಲಿಲ್ಲ. ಯಾಕೆಂದರೆ ಅವರೆಲ್ಲ ಮಜಾ ಮಾಡಲು ಹೋಗಿದ್ದರು ಎಂದು ಟೀಕಿಸಿದರು.
ಸಣ್ಣ ಅನನುಕೂಲವೂ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಇದರಿಂದ ಬೆಂಗಳೂರಿಗರಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಆದರೆ ಗ್ರಾಮೀಣ ಜನರಿಗೆ ಈ ಆದ್ಯತೆ ಇಲ್ಲ. ಕೇವಲ 2-3 ಗಂಟೆಯ ತೊಂದರೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರೆ ಗ್ರಾಮೀಣ ಜನರು ಏನೂ ಮಾಡಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅಗತ್ಯ ಬಿದ್ದಾಗ ಮುಂದೆಯೂ ರಾಲಿ ನಡೆಸುತ್ತೇನೆ ಎಂದರು. |