ಯಾರಿಂದ ಏನು ಲಾಭ ಇದೆಯೋ ಅವರ ಹಿಂದೆ ಹೋಗುವ ಜಾಯಮಾನದ ಯು.ಆರ್.ಅನಂತಮೂರ್ತಿ ನಡವಳಿಕೆ ಅವರ ಘನತೆಗೆ ತಕ್ಕುದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ಅನಂತಮೂರ್ತಿ ಅವರು ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಎಸ್ಎಸ್ ಅನ್ನು ನಿಷೇಧಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಅವರು ತಿರುಗೇಟು ನೀಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿ ಏನೆಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಸ್ವಂತ ಮನೆ ಹೊಂದಿದ್ದರೂ, ಜೆ.ಎಚ್.ಪಟೇಲ್ ಅವರ ಅವಧಿಯಲ್ಲಿ ಮನೆ ಇಲ್ಲ ಎಂದು ಸುಳ್ಳು ಅಫಿಡವಿತ್ ಸಲ್ಲಿಸಿ ಮುಖ್ಯಮಂತ್ರಿ ಕೋಟದಡಿ ಸೈಟು ಗಿಟ್ಟಿಸಿದ್ದರು ಎಂದು ಟೀಕಿಸಿದರು.
ಜೆಡಿಎಸ್ನವರು ಏನೋ ಕೊಡ್ತಾರೆ ಅಂದುಕೊಂಡು ಹೋಗಿದ್ದಾರೆ. ಜೆಡಿಎಸ್ನವರು ಏನು ಕೊಡ್ತಾರೆ ಎಂಬುದನ್ನು ಅನಂತಮೂರ್ತಿ ಅವರೇ ಸ್ಪಷ್ಟಪಡಿಸಬೇಕು ಎಂದರು.
ಅಪ್ಪ-ಮಕ್ಕಳ ಕೊನೆ ಆಟ ನೋಡಲು ಜೆಡಿಎಸ್ ಸಮಾವೇಶಕ್ಕೆ ಅಷ್ಟೊಂದು ಜನ ಬಂದಿದ್ದರು. ಜೆಡಿಎಸ್ ಸಮಾವೇಶದಿಂದ ಬಿಜೆಪಿ ಧೃತಿಗೆಟ್ಟಿಲ್ಲ. ದೇವೇಗೌಡರು ಇಂತಹ ಅನೇಕ ಸಮಾವೇಶಗಳನ್ನು ನಡೆಸಿದ್ದಾರೆ. ಆದರೆ ಏನೂ ಸಾಧಿಸಲಾಗಲಿಲ್ಲ ಎಂದು ವ್ಯಂಗ್ಯವಾಡಿದರು. |