ಸಾಮಾನ್ಯ ಜನರಿಗೆ ಕಾನೂನಿನ ನೆರವು ನೀಡಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದೆ.
'ಸಾಕ್ಷರತಾ ರಥ' ಎಂಬ ವಿನೂತನ ಯೋಜನೆ ರೂಪಿಸಿದೆ. ಈ ರಥವನ್ನು ನ.22 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಉದ್ಘಾಟಿಸಲಿದ್ದಾರೆ.
ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ವಾಹನದ ಒಳಭಾಗವನ್ನು ಕೋರ್ಟ್ ಮಾದರಿಯಲ್ಲೇ ಸಜ್ಜುಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ಇರುವಂತೆ ಗ್ರಂಥಾಲಯ, ಕಂಪ್ಯೂಟರ್, ವಿಚಾರಣೆ ನಡೆಸಲು ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ವಿ.ಗೋಪಾಲಗೌಡ ತಿಳಿಸಿದ್ದಾರೆ.
ಈ ರಥದ ಜೊತೆಗೆ ತೆರಳುವ ಕಾನೂನು ತಜ್ಞರು ಕೆಲವು ಸಣ್ಣಪುಟ್ಟ ವ್ಯಾಜ್ಯಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಈ ರಥದಲ್ಲಿ ಸುಮಾರು 80 ವಕೀಲರು ತೆರಳಲಿದ್ದಾರೆ. ಬೀದರ್ನಿಂದ ಇದರ ಸಂಚಾರ ಆರಂಭವಗೊಂಡು ಕ್ರಮೇಣ ರಾಜ್ಯದ ಎಲ್ಲ ಭಾಗಗಳಿಗೂ ಇದು ತೆರಳಿ ಸೇವೆ ನೀಡಲಿದೆ ಎಂದರು. |