ಸಮಾಜಕ್ಕೆ ಉತ್ತಮ ಸೇವೆ ನೀಡುವುದರಿಂದ ಜನಮಾನ್ಯತೆ ದೊರೆಯುತ್ತದೆ. ಜನಮನ್ನಣೆಯಿಂದ ಸಾಮಾಜಿಕ ಪ್ರಶಸ್ತಿ-ಪುರಸ್ಕಾರಗಳು ಲಭಿಸುತ್ತವೆ. ಸಮಾಜಕ್ಕೆ ಕೊಡುಗೆ ನೀಡುವ ಪ್ರವೃತ್ತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ನಾಗರಿಕ ಹಕ್ಕುಗಳ ಅನುಷ್ಠಾನ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಆರ್.ಠಾಗೋರ್ ಹೇಳಿದರು.
ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಎನ್.ಆರ್.ನಾರಾಯಣರಾವ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾರಾಯಣ್ ರಾವ್, ನಾವೆಷ್ಟೇ ಸಂಪಾದಿಸಿದರೂ ಮೂರು ಹೊತ್ತು ಊಟ, ಮಲಗಲು ಒಂದು ಹಾಸಿಗೆ ಹಾಗೂ ಓಡಾಡಲು ಒಂದು ಕಾರು ಮಾತ್ರ ಬಳಸಬಹುದು. ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ಸಿ.ರಾವ್, ಖಜಾಂಚಿ ಕೆ.ಬಾಲಚಂದ್ರ ಶೆಟ್ಟಿ, ಮಧುಕರ್ ಶೆಟ್ಟಿ, ಕರ್ನಾಟಕ ಪ್ರದೇಶ ಹೋಟೆಲುಗಳ ಸಂಘದ ಅಧ್ಯಕ್ಷ ಬಾ.ರಾಮಚಂದ್ರ, ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರಾಮೇಗೌಡ ಹಾಗೂ ಹೋಟೆಲ್ ಬ್ಯಾಂಕ್ ಅಧ್ಯಕ್ಷ ಪುಂಡಲಿಕ ಹಾಲಂಬಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. |