ಬೆಂಗಳೂರು: ನಗರದಲ್ಲಿ ಸಮಾವೇಶ ಹಾಗೂ ಪ್ರತಿಭಟನೆಗಳಿಂದ ಸಾಮಾನ್ಯ ಜನಜೀವನದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಉದ್ದೇಶಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ವಾರದ ಗಡುವು ನೀಡಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ.
ಇದುವರೆಗೆ ಯಾವ ವ್ಯಕ್ತಿ, ಯಾವ ಪಕ್ಷದಿಂದ ಏನು ತೊಂದರೆಯಾಗಿತ್ತು ಎಂಬುದರ ಕುರಿತು ನಾವು ಪೋಸ್ಟ್ ಮಾರ್ಟಮ್ ಮಾಡಲಿಚ್ಚಿಸುವುದಿಲ್ಲ. ಆದರೆ, ಮುಂದೇನು ಮಾಡಬೇಕೆಂಬುದು ನಮ್ಮ ಮುಂದಿರುವ ವಿಷಯ. ನಮಗೆ ಅಲ್ಪಕಾಲಿಕ ಕ್ರಮಗಳ ಬಗ್ಗೆ ಆಸಕ್ತಿ ಇಲ್ಲ. ಏನಿದ್ದರೂ ದೀರ್ಘಕಾಲೀನ ಕ್ರಮಗಳನ್ನು ಸೂಚಿಸಿ ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಪ್ರಧಾನಿ ರಾಷ್ಟ್ರಪತಿ ಬಂದಾಗ ಮಾತ್ರ ಜನ ಸಾಮಾನ್ಯರಿಗೆ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇದೆ ಎಂಬುದರ ಕುರಿತು ಮಾಹಿತಿ ನೀಡುತ್ತಿದ್ದೀರಿ. ಆದರೆ, ಮೊನ್ನೆ ನಡೆದ ಸಮಾವೇಶ ಅಥವಾ ಪ್ರತಿಭಟನೆಗಳ ಸಂದರ್ಭದಲ್ಲಿ ಯಾವ ಮಾರ್ಗಗಳಲ್ಲಿ ಸಂಚಾರಕ್ಕೆ ಅನುಕೂಲವಿಲ್ಲ ಎಂಬುದನ್ನು ಪೂರ್ವಭಾವಿಯಾಗಿ ಮಾಹಿತಿ ನೀಡಿಲ್ಲ. ಈವರೆಗೆ ಕೈಗೊಂಡ ಕ್ರಮಗಳಲ್ಲಿ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ನೀವು ಸೂಚಿಸಿರುವ ಹಳೆಯ ಕೇಂದ್ರ ಕಾರಾಗೃಹದ ಆರು ಎಕರೆ ಪ್ರದೇಶದಲ್ಲಿ ಸ್ವಾತಂತ್ರ್ಯ ಉದ್ಯಾನ ದೊಡ್ಡ ಪ್ರಮಾಣದ ಸಾರ್ವಜನಿಕ ಸಭೆಗಳಿಗೆ ಸಾಲುವುದಿಲ್ಲ ಎಂದು ನ್ಯಾ.ಎಸ್.ಆರ್.ಬನ್ನೂರ್ಮಠ್ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ. |