ರಾಜ್ಯದಲ್ಲಿ ಇ-ಆಡಳಿತ ನಿರ್ವಹಣೆಗೆ ಅಗತ್ಯ ಸಲಹೆ-ಸೂಚನೆ ನೀಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದೆ.
ಪಾರದರ್ಶಕ ಮತ್ತು ಸಮರ್ಥ ಆಡಳಿತ ನೀಡಲು ರಚಿಸಲಾಗಿರುವ ಸಮಿತಿ, ದೇಶದಲ್ಲಿ ಇ-ಆಡಳಿತದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಮಾರ್ಗಸೂಚಿ ತಯಾರಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
2020ರ ದೂರದೃಷ್ಟಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ದೀರ್ಘಕಾಲೀನ ಮತ್ತು ಅಲ್ಪಕಾಲೀನ ಕಾರ್ಯತಂತ್ರವನ್ನು ರೂಪಿಸುವುದು, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮೈಲಿಗಲ್ಲು ರೂಪಿಸುವುದು, ಇ-ಆಡಳಿತದ ಅನುಷ್ಠಾನವನ್ನು ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ನೋಡಿಕೊಳ್ಳುವುದು ಸಮಿತಿಯ ಜವಾಬ್ದಾರಿ.
ಸಮಿತಿಯ ವಿವರ: ಇನ್ಫೋಸಿಸ್ನ ನಂದನ್ ನೀಲೇಕಣಿ, ನಿರ್ದೇಶಕ ಮೋಹನ್ದಾಸ್ ಪೈ, ಗ್ಲೋಬಲ್ ಎಡ್ಜ್ ಸಾಫ್ಟ್ವೇರ್ನ ಎಂ.ಪಿ.ಕುಮಾರ್, ಇ-ಆಡಳಿತದ ಸಲಹೆಗಾರ ಮಹಾಬಲೇಶ್ವರ ಹೆಗಡೆ, ಐಐಐಟಿ ನಿರ್ದೇಶಕ ಪ್ರೊ. ಸಡಗೋಪನ್, ಬ್ರಿಕ್ವರ್ಕ್ ಅಧ್ಯಕ್ಷ ವಿವೇಕ್ ಕುಲಕರ್ಣಿ, ಇ-ಗವರ್ನಮೆಂಟ್ ಪೌಂಡೇಶನ್ ಶ್ರೀಕಾಂತ್ ನಾದಮುನಿ ಸಮಿತಿಯಲ್ಲಿದ್ದಾರೆ. |