ಹೊರನಾಡಿನ ಮಾವಿನಹೊಲದಲ್ಲಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ಮೂವರು ನಕ್ಸಲೀಯರಲ್ಲಿ (ಓರ್ವನ ಗುರುತು ಸರಿಯಾಗಿ ಪತ್ತೆ ಹಚ್ಚಲಾಗಿದೆ) ಇಬ್ಬರ ಗುರುತು ಪತ್ತೆ ಹಚ್ಚಲಾಗಿದ್ದು, ದೇವಣ್ಣ ಎಂದು ಶಂಕಿಸಿದ್ದ ಶವ ಮೂಡಿಗೆರೆಯ ಉದಸೆ ದೇವಯ್ಯ ಎಂದು ಹಾಗೂ ವೆಂಕಟೇಶ್ ಎಂದು ಶಂಕಿಸಿದ್ದ ಶವ ಕಳಸ ಸಮೀಪದ ನಾಗಸಾಲಮಕ್ಕಿ ರವಿ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಉದಸೆಯ ದೇವಯ್ಯ (34ವ) ಮೂಡಿಗೆರೆ ಕಾಲೇಜಿನಲ್ಲಿ ಬಿಎ ಓದಿದ್ದ, ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಒಂದು ವರ್ಷ ಹಂಗಾಮಿ ನೌಕರನಾಗಿ ಕಾರ್ಯನಿರ್ವಹಿಸಿದ್ದ.
ವಿದ್ಯಾರ್ಥಿಯಾಗಿದ್ದಾಗ ಕಷ್ಟಪಟ್ಟು ಓದಿದ್ದ ದೇವಯ್ಯ ಮೌನಿಯಾಗಿದ್ದ, ಅಲ್ಲದೇ ಊರಿನ ಕೆಲಸಕ್ಕೆ ಮೊದಲಿಗನಾಗಿ ಪಾಲ್ಗೊಳ್ಳುತ್ತಿದ್ದ. ಆದರೆ ಆತ ನಕ್ಸಲ್ ಆಗಿದ್ದ ಅಂತ ನಮಗೆ ತಿಳಿದಿರಲಿಲ್ಲ ಎಂದು ದೇವಯ್ಯನ ಹಿರಿಯಣ್ಣ ಮುದ್ದಯ್ಯ ಪ್ರಜಾವಾಣಿಯೊಂದಿಗೆ ಮಾತನಾಡುತ್ತ ಅಲವತ್ತುಕೊಂಡಿದ್ದಾರೆ.
ಮತ್ತೊಬ್ಬ ನಾಗಸಾಲ್ಮಕ್ಕಿಯ ದಲಿತ ಕಾಲನಿಯ ಜಾಣಮ್ಮ ಹಾಗೂ ಬೋಬಯ್ಯ ದಂಪತಿಗಳ ಮಗನಾದ ರವಿ (19)ತನ್ನ ತಂದೆ, ತಾಯಿಯಂತೆ ತೋಟದ ಕಾರ್ಮಿಕನಾಗಿದ್ದ, ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ.
ರವಿ ಉತ್ತಮ ಕೆಲಸಗಾರನಾಗಿದ್ದ, ಹೆಮ್ಮಕ್ಕಿಯಲ್ಲಿ ಭಗತ್ಸಿಂಗ್ ಯುವಜನ ವೇದಿಕೆ ಎಂಬ ಪ್ರಗತಿಪರ ಸಂಘಟನೆಯನ್ನು ಕೆಲ ವರ್ಷಗಳ ಹಿಂದೆ ಸಂಘಟಿಸಲಾಗಿತ್ತು, ರವಿ ಈ ಸಂಘಟನೆಯ ಸಕ್ರಿಯ ಕಾರ್ಯಕರ್ತ.
ಜಿಲ್ಲೆಯ ಇತಿಹಾಸದಲ್ಲೇ ಪೊಲೀಸರ ಗುಂಡಿಗೆ ಬಲಿಯಾದ ಅತ್ಯಂತ ಕಿರಿಯ ನಕ್ಸಲ್ ರವಿ(19) ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಎನ್ಕೌಂಟರ್ನಲ್ಲಿ ಬಲಿಯಾದ ಮತ್ತೊಬ್ಬ ನಕ್ಸಲ್ ಮನೋಹರನ ಸಹೋದರಾದ ಮಧೂಕೇಶ್ವರ ಮತ್ತು ಮಹೇಶ್ ಶಿವಮೊಗ್ಗ ಜಿಲ್ಲೆ ಸೊರಬದಿಂದ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿ ಮನೋಹರ ಶವವನ್ನು ಪೊಲೀಸರಿಂದ ಪಡೆದು ಊರಿಗೆ ಕೊಂಡೊಯ್ದರು. |