ಮದ್ದೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಸಂದರ್ಭ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಅನಾರೋಗ್ಯದ ಕಾರಣ ಬಿಜಿಎಸ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಯೋಗಕ್ಷೇಮ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ಜೆಡಿಎಸ್ ನೀಡಿರುವ ದೂರಿನ ಕುರಿತು ಪ್ರಶ್ನಿಸಿದಾಗ, ಪ್ರತಿಪಕ್ಷಗಳು ಸಲ್ಲದ ಆರೋಪ ಮಾಡುತ್ತಿವೆ. ಪ್ರಚಾರ ಸಂದರ್ಭದಲ್ಲಿ ನಾನು ಯಾವುದೆ ನೀತಿಸಂಹಿತೆ ಉಲ್ಲಂಘಿಸಿಲ್ಲ. ಮುಖ್ಯಮಂತ್ರಿಯೋರ್ವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಕೈಗೊಳ್ಳುವ ಕ್ರಮಗಳನ್ನಷ್ಟೇ ಇಲ್ಲೂ ಅನುಸರಿಸಲಾಗಿದೆಯಷ್ಟೇ ಎಂದು ಸಮರ್ಥಿಸಿಕೊಂಡರು.ಉಪಚುನಾವಣೆ ನಡೆಯುತ್ತಿರುವ ಯಾವುದೇ ಕ್ಷೇತ್ರದಲ್ಲಿ ಆಡಳಿತ ಯಂತ್ರವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಕೇವಲ ಟೀಕೆ ಮಾಡುವ ಉದ್ದೇಶದಿಂದ ಟೀಕೆ ಮಾಡುವ ಪ್ರತಿಪಕ್ಷಗಳಿಗೆ ಅದೇ ಒಂದು ಕಾಯಕವಾಗಿದೆ ಎಂದು ಕಿಡಿಕಾರಿದರು.ಸಿದ್ದು ಜೊತೆ ಒಪ್ಪಂದವಿಲ್ಲ ಮಾಜಿ ಉಪಮುಖ್ಯಮಂತ್ರ ಸಿದ್ದರಾಮಯ್ಯ ಅವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳಾಗಿದೆಯೇ ಎಂಬ ಪ್ರಶ್ನೆಗೆ ನಾವು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಸಿದ್ದರಾಮಯ್ಯನವರು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಾರದೆ ಇರುವುದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು ಎಂದು ನುಡಿದರು. |