ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ತಮಿಳುನಾಡಿನ ಗಾಂಧಿ ಎಂಬವರು ಅಲ್ಲಿನ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದಕ್ಕೆ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಇನ್ನಾದರೂ ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಡದಿದ್ದರೆ ಜನವರಿ ಅಂತ್ಯದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದಕ್ಕುವುದೇ..? ಎಂಬ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕುರಿತ ವರದಿ ಸಲ್ಲಿಸಲು ರಚಿಸಿದ ತಜ್ಞರ ಸಮಿತಿಯಲ್ಲಿ ಯಾರೊಬ್ಬರು ಕನ್ನಡ ವಿದ್ವಾಂಸರು ಇಲ್ಲದಿರುವುದು ವಿಷಾದನೀಯ. ಸಮಿತಿಯಲ್ಲಿ ಇಬ್ಬರು ತಮಿಳುರು ಇದ್ದಾರೆ. ಆದರೆ ಕನ್ನಡದಿಂದ ಯಾರೊಬ್ಬರೂ ಇಲ್ಲ ಎಂದರು.
ವಿಚಾರವಾದಿ ಡಾ.ಜಿ.ರಾಮಕೃಷ್ಣ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷ ಪ್ರೊ.ಡಿ.ಲಿಂಗಯ್ಯ ಉಪಸ್ಥಿತರಿದ್ದರು. |