ವಿಧಾನಮಂಡಲದಲ್ಲಿ ಮಂಗಳವಾರ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆಯಿತು.
ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರು ಬೀದರ್ನಿಂದ ಆಯ್ಕೆಯಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ಫೆ.4 ರಂದು ಅಂಗೀಕರಿಸಿರುವುದಾಗಿ ಪ್ರಕಟಿಸಿದಾಗ ಖರ್ಗೆ ಹಾಗೂ ಈಶ್ವರಪ್ಪ ನಡುವೆ ವಾದ-ವಿವಾದ ಉಂಟಾಯಿತು.
ಶೆಟ್ಟರ್ ಅವರು ಇದನ್ನು ಪ್ರಕಟಿಸುತ್ತಿದ್ದಂತೆ, ಎದ್ದು ನಿಂತ ಖರ್ಗೆ, ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ, ಏನಾದರೂ ಕಾಯಿಲೆ ಬಂದಿದೆಯೇ? ಏನು ಕಾರಣವಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಈಶ್ವರಪ್ಪ, ಕಾಂಗ್ರೆಸ್ಗೆ ವಾಸಿ ಪಡಿಸಲಾಗದ ಕಾಯಿಲೆ ಬಂದಿರುವುದರಿಂದ ಅವರೆಲ್ಲ ಬಿಜೆಪಿಗೆ ಬಂದಿದ್ದಾರೆ ಎಂದರು.
ಇದರಿಂದ ಕೆರಳಿದ ಖರ್ಗೆ, ಬಿಜೆಪಿಗೆ ಬಂದಿರುವುದು ಏಡ್ಸ್, ಅಲ್ಲಿಗೆ ಬಂದವರಿಗೆ ಕೊನೆಗೆ ಗೊತ್ತಾಗುತ್ತದೆ ಎಂದರು. ಇದಕ್ಕೆ ಪ್ರತಿಯಾಗಿ ಈಶ್ವರಪ್ಪ, ಕಾಂಗ್ರೆಸ್ ಪಕ್ಷಕ್ಕೆ ಕಾಯಿಲೆ ಬಂದಿದೆ. ಮುಂದೆಂದೂ ಅದು ವಾಸಿಯಾಗುವುದಿಲ್ಲ. ಆದ್ದರಿಂದ ಆ ಪಕ್ಷದಿಂದ ರಾಜ್ಯದ ಉದ್ದಾರ ಸಾಧ್ಯವಿಲ್ಲ. ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಮಾತನ್ನು ನಾಗಮಾರಪಲ್ಲಿ ನನಗೆ ತಿಳಿಸಿದ್ದಾರೆ ಎಂದು ಖರ್ಗೆಯವರನ್ನು ಲೇವಡಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಖರ್ಗೆ, ನಿಮ್ಮ ಪಕ್ಷಕ್ಕೆ ಏಡ್ಸ್ ಅಂಟಿದೆ. ಈಗ ಗೊತ್ತಾಗುವುದಿಲ್ಲ. ಕೊನೆಗೆ ಗೊತ್ತಾಗಿ ಎಲ್ಲರು ಪಶ್ಚಾತ್ತಾಪ ಪಡುತ್ತಾರೆ ಎಂದರು. |