ಕಳೆದ ತಿಂಗಳು ಮಂಗಳೂರಿನ ಪಬ್ಗೆ ಶ್ರೀರಾಮಸೇನೆ ಸೇನೆ ದಾಳಿ ನಡೆಸಿ, ಯುವತಿಯರ ಮೇಲೆ ಹಲ್ಲೆ ನಡೆಸಿರುವುದನ್ನು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ತೀವ್ರವಾಗಿ ಖಂಡಿಸಿದ್ದಾರೆ.ಶನಿವಾರ ನಗರದ ಅರಮನೆ ಮೈದಾನದಲ್ಲಿ ಭಯೋತ್ಪಾದನಾ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಬ್ನಲ್ಲಿ ಯುವತಿಯರ ಮೇಲೆ ಶ್ರೀರಾಮಸೇನೆ ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ಯಾರೂ ಬೆಂಬಲಿಸಬಾರದು, ಭಾರತೀಯ ಸಂಸ್ಕೃತಿ ಹಿಂಸೆಯನ್ನು ಮಾಡುವುದಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಬದುಕಲು ಅವಕಾಶ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪಬ್ನಲ್ಲಿ ಯುವತಿಯರ ಮೇಲೆ ಶ್ರೀರಾಮಸೇನೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ ಆಡ್ವಾಣಿ, ಈ ಬಗ್ಗೆ ಯಾವುದೇ ಸಂಧಾನ ಇಲ್ಲ, ಭಾರತೀಯ ಸಂಸ್ಕೃತಿಗೆ ಅಪವಾದದ್ದು, ಈ ಕ್ರಮ ಶುದ್ಧ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಬ್ಗಳಲ್ಲಿ ಅಶ್ಲೀಲ, ಅಕ್ರಮವಾಗಿ ಏನಾದರು ನಡೆಯುತ್ತಿದೆ ಎಂಬುದನ್ನು ಗಮನಿಸಿದರೆ ಆ ಬಗ್ಗೆ ಬೇರೆ ತೆರನಾದ ಕ್ರಮ ಅನುಸರಿಸಬೇಕೆ ವಿನಃ ದಾಳಿ ನಡೆಸುವುದಲ್ಲ ಎಂದು ಸಲಹೆ ನೀಡಿದರು.ಯುವಕ-ಯುವತಿಯರು ಅವರ ವೈಯಕ್ತಿಕ ದಾರಿಯಲ್ಲಿ ಸಾಗುತ್ತಿರುತ್ತಾರೆ, ಅದಕ್ಕೆ ನೀವು ಅಂಕಿತ ಹಾಕಬೇಕಾಗಿಲ್ಲ, ಆದರೆ ಅಂತಹವರನ್ನು ಕಂಡಲ್ಲಿ ದಾಳಿ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ಆಡ್ವಾಣಿ ಶ್ರೀರಾಮಸೇನೆಯನ್ನು ತರಾಟೆಗೆ ತೆಗೆದುಕೊಂಡರು. |