ಬೇಸಿಗೆಯ ಬಿಸಿಲಿನ ಧಗೆ ಹೆಚ್ಚುತ್ತಿದೆ. ಇದಕ್ಕೆ ಬಿಜೆಪಿಯೇ ಕಾರಣ. ಇಂಥ ಬಾಲಿಶ ಆರೋಪವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾಡುತ್ತಿದ್ದು, ಇಂಥ ಆರೋಪಗಳಿಗೆ ಉತ್ತರವನ್ನು ಕೂಡ ಕೊಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಂದೂ ಕಂಡಿಯದ ರೀತಿಯಲ್ಲಿ ನಡೆಯದ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯ ನೋಡಿ ಕಾಂಗ್ರೆಸಿಗರು ಮತ್ತು ಜೆಡಿಎಸ್ ಮುಖಂಡರು ಮಂಕಾಗಿದ್ದಾರೆ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಛೇಡಿಸಿದ್ದಾರೆ.ರಾಜ್ಯದಲ್ಲಿ ಇಂದು ವಿದ್ಯುತ್ ಸಮಸ್ಯೆ ಇದೆ. ರಸ್ತೆಗಳು ಗುಂಡಿ ಬಿದ್ದವೆ. ಆದರೆ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಹೊರತು ಬಿಜೆಪಿ ಅಲ್ಲ. ಮುಂದಿನ ನಾಲ್ಕು ವರ್ಷಗಳು ಕಳೆದ ಬಳಿಕ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಇದ್ದರೆ, ರಸ್ತೆ ಗುಂಡಿ ಬಿದ್ದಿದ್ದರೆ ನನ್ನನ್ನು ಹಿಡಿದು ನಿಲ್ಲಿಸಿ ಕೇಳಿ ಎಂದು ಸವಾಲು ಹಾಕಿದ ಯಡಿಯೂರಪ್ಪ, ಪರಿಶಿಷ್ಟ ಜಾತಿ ಮತ್ತು ವರ್ಗದ ಅಭಿವೃದ್ದಿಗೆ ಹಿಂದಿನ ಸರ್ಕಾರ ನೀಡಿದ್ದು 600 ಕೋಟಿ ರೂ.ಗಳಾದರೆ ನಮ್ಮ ಸರ್ಕಾರ ನೀಡಿದ್ದು, 3600 ಕೋಟಿ ರೂ. ಇಂಥ ನೂರು ಉದಾಹರಣೆಗಳು ಕಣ್ಣೆದುರೇ ಇವೆ ಎಂದರು. ಕನಿಷ್ಠ 22 ಸ್ಥಾನ ಗೆಲ್ಲಬೇಕು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 22 ಸ್ಥಾನ ಗೆಲ್ಲಬೇಕು. ಆಗ ದೆಹಲಿಯಲ್ಲಿ ನಮ್ಮ ಮರ್ಯಾದೇ ಸಹಜವಾಗಿಯೇ ಉಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿ ಗುಜರಾತ್ಗೆ ಸಮಾನವಾಗಿ ಬೆಳೆಯುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು. |