ಲೋಕಸಭಾ ಚುನಾವಣೆ ಘೋಷಣೆಯಾಗುವುದರೊಂದಿಗೆ ರಾಜಕೀಯ ರಂಗೇರುತ್ತಿದೆ. ಲೋಕಸಭಾ ಚುನಾವಣೆಯ ಕಾವು ನೇರವಾಗಿ ವಿಧಾನಸೌಧಕ್ಕೂ ತಟ್ಟಿದ್ದು, ಅಧಿಕಾರಿಗಳು. ಸಚಿವರುಗಳಿಲ್ಲದೇ ವಿಧಾನಸೌಧ ಭಣಗುಡುತ್ತಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಮುಖ್ಯಮಂತ್ರಿಗಳು ಸರಿಯಾಗಿ ವಿಧಾನಸೌಧಕ್ಕೆ ಬಂದಿಲ್ಲ. ಕಳೆದ ವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಆದರೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆ ಸಭೆಗೂ ಮುಖ್ಯಮಂತ್ರಿಗಳು ಗೈರುಹಾಜರಾಗಿದ್ದರು.
ಕಂದಾಯ ಮಂತ್ರಿ ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ವಿಧಾನಸೌಧ ಅಥವಾ ವಿಕಾಸಸೌಧದಕ್ಕೆ ಭೇಟಿ ನೀಡದೆ ತಿಂಗಳುಗಳೇ ಸರಿದಿವೆ.
ವಾರಕ್ಕೆ ಒಂದೆರಡು ಬಾರಿಯಾದರೂ ವಿಧಾನಸೌಧಕ್ಕೆ ಬಂದು ಅಧಿಕಾರಿಗಳ ಸಭೆ ನಡೆಸುವ ಅಭ್ಯಾಸವನ್ನು ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಸುರೇಶ್ ಕುಮಾರ್ ಇಟ್ಟುಕೊಂಡಿದ್ದಾರೆ. |