ಮರಾಠಿ ಪರ ನಿಲುವು ತಳೆದ ತಪ್ಪಿಗಾಗಿ ಕ್ಷಮೆ ಕೇಳಿದರೆ ಸಮಸ್ಯೆ ಬಗೆಹರಿಯವುದಿಲ್ಲ. ಸಂಸದ ಅಂಗಡಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟಿಸಬೇಕು ಎಂದು ಪಟ್ಟು ಹಿಡಿದಿರುವ ಕರ್ನಾಟಕ ರಕ್ಷಣಾ ವೇದಿಕೆ, ಒಂದು ವೇಳೆ ಅಂಗಡಿಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಮತ ನೀಡದಂತೆ 28 ಲೋಕಸಭಾ ಕ್ಷೇತ್ರದಲ್ಲೂ ಆಂದೋಲನ ನಡೆಸುವುದಾಗಿ ಎಚ್ಚರಿಸಿದೆ.
ಸುರೇಶ್ ಅಂಗಡಿ ಪ್ರಕರಣವನ್ನು ನೋಡಿದರೆ ಬಿಜೆಪಿಯವರು ವೀರಪ್ಪನ್ಗೂ ಟಿಕೆಟ್ ನೀಡಿ ಗೆಲ್ಲಿಸುತ್ತಿದ್ದರು ಜೊತೆಗೆ ಭಯೋತ್ಪಾದಕರಿಗೂ ಟಿಕೆಟ್ ನೀಡುತ್ತಿದ್ದರು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅಕಾಡೆಮಿ ಅಧ್ಯಕ್ಷ ಸ್ಥಾನ, ಪ್ರಶಸ್ತಿ ವಿತರಣೆ ಬಾಕಿ ಇರುವುದರಿಂದ ಸಾಹಿತಿಗಳು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಟೀಕಿಸಿದ ಅವರು ನಮ್ಮ ಹೋರಾಟ ಮುಂದುವರಿಯಲಿದೆ. ಬೆಳಗಾವಿಯಲ್ಲಿ ಸಾಹಿತಿ, ಸ್ವಾಮೀಜಿಗಳ ರಾಲಿ ನಡೆಯಲಿದೆ ಎಂದರು.
ತಪ್ಪು ನಡೆದಿರುವುದನ್ನು ಸಂಸದರು ಹಾಗೂ ಮುಖ್ಯಮಂತ್ರಿಗಳು ಸಮರ್ಥಿಸಿಕೊಳ್ಳುವುದು ಅವಮಾನಕರ ಸಂಗತಿ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. |