ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ನೈಸ್ ಕಂಪೆನಿಯ ಮುಖ್ಯಸ್ಥ ಅಶೋಕ್ ಖೇಣಿ ಸ್ಪರ್ಧೆಗೆ ಇಳಿಯುವುದನ್ನು ಸ್ವಾಗತಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖೇಣಿ ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿಂದಲೇ ಸ್ಪರ್ಧಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಿಂದ ಕೆಟ್ಟ ಶಕ್ತಿಗಳನ್ನು ಹೊರದಬ್ಬಲು ದೇವೇಗೌಡರ ವಿರುದ್ಧ ಸ್ಪರ್ಧಿಸುತ್ತೇನೆ ಎನ್ನುವ ಖೇಣಿಯ ಹೇಳಿಕೆಯ ವಿರುದ್ಧ ಕಿಡಿಕಾರಿದ ಅವರು ರಾಜ್ಯದ ಬೊಕ್ಕಸವನ್ನು, ಸಂಪತ್ತನ್ನು ಲೂಟಿ ಮಾಡುವವರಿಗೆ ತಾನು ಎಂದೂ ಕೆಟ್ಟವನೇ, ಖೇಣಿ ಎಲ್ಲಿಂದಲಾದರೂ ಸ್ಪರ್ಧಿಸಲಿ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದರು.
ರಾಜಕೀಯವಾಗಿ ತಮ್ಮನ್ನು ಮುಗಿಸಲು ಎಲ್ಲಾ ವಿರೋಧಿಗಳು, ಅಘೋಷಿತ ಶತ್ರುಗಳು ಒಂದಾಗಿದ್ದಾರೆ. ಇದಕ್ಕೆ ತಾವು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ, ಇಂತಹುದನ್ನೆಲ್ಲ ಜನತೆಯ ಆಶೀರ್ವಾದದಿಂದ ಸಮರ್ಥವಾಗಿ ಎದುರಿಸುವ ಶಕ್ತಿ ತಮಗಿದೆ ಎಂದು ಹೇಳಿದರು.
ಇದೇ ನೈಸ್ ಕಂಪೆನಿಯ ಖೇಣಿ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ, ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಎಷ್ಟು ಮಂದಿಗೆ ಹಣ ಕೊಟ್ಟಿದ್ದರು ಎಂಬುದು ಗೊತ್ತಿದೆ. ಯಾರಿಂದಲೂ ಜೆಡಿಎಸ್ನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹಾಸನ ಅಥವಾ ಮಂಡ್ಯದಿಂದ ಸ್ಪರ್ಧಿಸುವುದಾಗಿ ಅಶೋಕ್ ಖೇಣಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. |