ಹಿಂದೂ ಸಮಾಜೋತ್ಸವ ಬಿಜೆಪಿ ಕಾರ್ಯಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿರುವ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಯಕ್ತಿಕ ಆಸಕ್ತಿಯಿಂದ ಭಾಗವಹಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜೋತ್ಸದಲ್ಲಿ ತಾವು ಭಾಗವಹಿಸಿದ್ದೆ ತಪ್ಪು ಎಂಬ ವಿರೋಧ ಪಕ್ಷಗಳ ಟೀಕೆಯನ್ನು ತರಾಟೆಗೆ ತೆಗೆದುಕೊಂಡರು.
ನಾನು ಮತ್ತು ರಾಜ್ಯಾಧ್ಯಕ್ಷ ಸದಾನಂದ ಗೌಡರು ವೈಯಕ್ತಿಕ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು ಎಂದು ಆಚಾರ್ಯ ಸ್ಪಷ್ಟನೆ ನೀಡಿದ್ದಾರೆ. ಕರಾವಳಿ ಭಾಗದಲ್ಲಿ ಈಚೆಗೆ ನೈತಿಕ ಪೊಲೀಸ್ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ವ್ಯಾಖ್ಯಾನ ನೀಡಿದ ಆಚಾರ್ಯ, ಹಿಂದಿಗಿಂತಲೂ ಈಗ ಪರಿಸ್ಥಿತಿ ಸುಧಾರಿಸಿದೆ. 1953ರಲ್ಲಿ ನಾನು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಗ, ಕೋಮು ಗಲಭೆ ಸಂಭವಿಸಿದರೆ ಮೂರು ನಾಲ್ಕು ದಿನ ಮನೆಯಿಂದ ಹೊರಗೆ ಬರುವ ಸ್ಥಿತಿ ಇರುತ್ತಿರಲಿಲ್ಲ. ಈಗ ನಡೆದಿರುವುದು ಸಣ್ಣಪುಟ್ಟ ಘಟನೆಗಳು. ಅದು ಹೆಚ್ಚು ಹರಡದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರಿಗೆ ಶಹಭಾಷ್ಗಿರಿ ನೀಡಿದರು.
ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಿತ್ರದ ನಿರ್ದೇಶಕರು ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿರಲಿಲ್ಲ. ಅಲ್ಲದೆ ಸಮುದ್ರದಿಂದ 500 ಮೀಟರ್ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಮಾಡಬಾರದೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಆ ಕಾರಣಕ್ಕೆ ವಿವಾದ ಎದ್ದಿದೆಯೇ ಹೊರತು ಚಾಪ್ಲಿನ್ ಜಾತಿಗೆ ಸಂಬಂಧಿಸಿದಂತೆ ಅಲ್ಲ ಎಂದರು. |