ಬೇರೆ ಪಕ್ಷಗಳ ಮುಖಂಡರನ್ನು ಕರೆತಂದು ಬಿಜೆಪಿ ರಾಜ್ಯದಲ್ಲಿ ತನ್ನ ಅಭ್ಯರ್ಥಿಗಳೆಂದು ಘೋಷಿಸಿರುವುದು 'ಹ್ಯಾಂಡ್ ಲೋನ್' (ಕೈ ಸಾಲ) ರಾಜಕಾರಣ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಬೇರೆ ಪಕ್ಷದ ಮುಖಂಡರೆಲ್ಲರನ್ನೂ ಕರೆತಂದು ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳೆಂದು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ. ಇದು ಒಂದು ರೀತಿ ಕೈ ಸಾಲದ ಲೆಕ್ಕಾಚಾರ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯದಲ್ಲಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಹುತೇಕ ಮಂದಿ ಕಾಂಗ್ರೆಸ್ ಪಕ್ಷದವರು ಅಥವಾ ಜೆಡಿಎಸ್ನವರು. ಈ ಮುಖಂಡರಲ್ಲಿ ಯಾರೊಬ್ಬರೂ ಆ ಪಕ್ಷದ ಸೈದ್ದಾಂತಿಕ ಹಿನ್ನೆಲೆಯಿಂದ ಬಂದವರಲ್ಲ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮತ್ತೊಂದು ರೀತಿಯಲ್ಲಿ ಇನ್ಸಂಟ್ ಕಾಫಿ ಎಂದರು.
ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. ಕೇಂದ್ರ ಸಚಿವ ಎ.ಕೆ.ಆಂಟನಿ ನೇತೃತ್ವದ ಪರಿಶೀಲನಾ ಸಮಿತಿ ಅಂತಿಮ ಸುತ್ತಿನ ಸಭೆ ನಡೆಸಿದ ಬಳಿಕ ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಪರ್ಧಿಸುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಖರ್ಗೆ ಹೇಳಿದರು. |