ಗೃಹ ಇಲಾಖೆಗೆ ವಿ.ಎಸ್.ಆಚಾರ್ಯ ತಕ್ಕ ಮಂತ್ರಿ ಅಲ್ಲ, ಅವರಿಗೆ ಮುಜರಾಯಿ ಇಲಾಖೆಯೇ ಸೂಕ್ತ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕಟುವಾಗಿ ಲೇವಡಿ ಮಾಡಿದ್ದಾರೆ.
ಅವರು ಬುಧವಾರ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ನಿರ್ಮಾಣ್ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತ, ಸ್ವತಃ ಗೃಹ ಮಂತ್ರಿಗಳ ಜಿಲ್ಲೆಯಲ್ಲೇ ಚರ್ಚ್ಗಳನ್ನು ಧ್ವಂಸ ಮಾಡಲಾಯಿತು. ಆದರೂ ಕೂಡ ಬಿಜೆಪಿ ಸಂಸ್ಕೃತಿ, ಧಾರ್ಮಿಕತೆ ಹೆಸರಲ್ಲಿ ಪರೋಕ್ಷವಾಗಿ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಮಾತಿನುದ್ದಕ್ಕೂ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕೊಟ್ಟ ಭರವಸೆಗಳನ್ನು ಈಡೇರಿಸದೆ ಜನರ ಹಾದಿ ತಪ್ಪಿಸುವ ಕೆಲಸದಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ. ಯಾವುದೇ ಅಭಿವೃದ್ದಿ ರಾಜಕಾರಣ ಮಾಡದೇ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕವೇ ಜನರಿಗೆ ಮಂಕುಬೂದಿ ಎರಚುತ್ತಿರುವುದಾಗಿ ಹೇಳಿದರು. |