ಬಳ್ಳಾರಿ ಜಿಲ್ಲೆಯಲ್ಲಿ ಅಧಿಕಾರಿಗಳೇ ಸ್ವತಃ ಆಡಳಿತರೂಢ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಜಾರಿ ಕಷ್ಟಸಾಧ್ಯ ಎಂಬ ಪ್ರತಿಪಕ್ಷಗಳ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಚುನಾವಣಾ ಆಯೋಗದ ಆದೇಶದಂತೆ ಅಲ್ಲಿನ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಐದು ಮಂದಿಯನ್ನು ಎತ್ತಂಗಡಿ ಮಾಡಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಎನ್.ಶಿವರಾಜ್, ಹೆಚ್ಚುವರಿ ಎಸ್ಪಿ ಅಶೋಕ ಕುರೇರ, ಕೂಡ್ಲಿಗಿ ಡಿವೈಎಸ್ಪಿ ಎಚ್.ವೈ.ತುರಾಯಿ, ಕೌಲ್ ಬಜಾರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿದ್ಯಾಧರ ದತ್ತರಾಮ್ ಬೈಕೇರಿಕರ್ ಮತ್ತು ಸಂಡೂರು ಪೊಲೀಸ್ ಇನ್ಸ್ಪೆಕ್ಟರ್ ರಮಾಕಾಂತ ಯಲ್ಲಪ್ಪ ಉಲ್ಲೂರು ಅವರನ್ನು ವರ್ಗಾವಣೆ ಮಾಡಲಾಗಿದೆ.
ಚುನಾವಣಾ ಆಯೋಗದ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ಗುರುಲಿಂಗಪ್ಪ ಅವರನ್ನು ಬಳ್ಳಾರಿ ಪಾಲಿಕೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಬಳ್ಳಾರಿಯ ನೂತನ ಹೆಚ್ಚುವರಿ ಎಸ್ಪಿಯಾಗಿ ಡಿ.ಎಂ.ಕೃಷ್ಣಂರಾಜು ಅವರನ್ನು ನಿಯೋಜಿಸಲಾಗಿದೆ. ಈ ಹಿಂದೆ ಆ ಹುದ್ದೆಯಲ್ಲಿದ್ದ ಅಶೋಕ್ ಕುರೇರ ಅವರನ್ನು ರಾಜ್ಯ ಗುಪ್ತವಾರ್ತೆ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಆರ್.ನಾಗರಾಜ್ ಮತ್ತು ಸಂಡೂರು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಶಮೀದ್ ಪಾಷಾ ಅವರು ನೇಮಕವಾಗಿದ್ದಾರೆ. ವಿದ್ಯಾಧರ ದತ್ತರಾಮ್ ಬೈಕೇರಿಕರ್ ಇನ್ಸ್ಪೆಕ್ಟರ್, ಬೆಸ್ಕಾಂ, ದಾವಣಗೆರೆ, ರಮಾಕಾಂತ ಯಲ್ಲಪ್ಪ ಉಲ್ಲೂರು ಇನ್ಸ್ಪೆಕ್ಟರ್ ಡಿಸಿಆರ್ಇ ದಾವಣಗೆರೆಗೆ ವರ್ಗಾ ಮಾಡಲಾಗಿದೆ ಎಂದು ವಿದ್ಯಾಶಂಕರ್ ತಿಳಿಸಿದರು. |