ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ ಒಗ್ಗಟ್ಟು ಕೇವಲ ಮೂರು ದಿನಕ್ಕಷ್ಟೇ ಸೀಮಿತ ಎಂಬಂತೆ, ಇದೀಗ ಕಾಂಗ್ರೆಸ್ನ ಹಿರಿಯ ಮುಖಂಡರೇ ಬಂಡಾಯದ ಬಾವುಟ ಹಾರಿಸುವ ಮೂಲಕ ಅಸಮಾಧಾನ ಭುಗಿಲೆದ್ದಿದೆ.
ದಾವಣಗೆರೆಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಮುನಿಸಿಕೊಂಡಿದ್ದಾರೆ. ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಸಾಬೀತಾಗುತ್ತಿದ್ದಂತೆ ಬಂಡಾಯದ ಬಾವುಟ ಹಾರಿಸಲು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ.
ದಾವಣಗೆರೆಯ ಭಾರತ್ ನಿರ್ಮಾಣ್ ಸಮಾವೇಶದಲ್ಲಿ ಕೃಷ್ಣ ಹಾಗೂ ಜಾಫರ್ ಷರೀಫ್ ಅವರಿಗೆ ತಕ್ಕ ಮರ್ಯಾದೆ ಸಿಗಲಿಲ್ಲ ಎಂಬ ಭಾವನೆ ಆರೋಪ ಅವರದ್ದು. ಕೃಷ್ಣ ಅವರಿಗೆ ವೇದಿಕೆ ಏರುವುದಿರಲಿ ಸೋನಿಯಾ ಸನಿಹಕ್ಕೆ ಹೋಗಲೂ ಅವಕಾಶ ಸಿಗಲಿಲ್ಲ.
ರಾಲಿ ಉದ್ದೇಶಿಸಿ ಮಾತನಾಡಿದ ಸೋನಿಯಾ ಹಾಗೂ ಆಜಾದ್, ಮುಖ್ಯಮಂತ್ರಿಯಾಗಿ ಕೃಷ್ಣ ಮಾಡಿದ ಸಾಧನೆಯನ್ನು ಕೊಂಡಾಡಿದರು. ಆದರೆ, ಕೃಷ್ಣಗೆ ನಿಗದಿಪಡಿಸಿದ್ದ ಜಾಗ ವೇದಿಕೆಯಿಂದ ದೂರವಿತ್ತು. ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರುಗಳೇ ಇದಕ್ಕೆ ಕಾರಣ ಎಂಬುದು ಕೃಷ್ಣ ಹಾಗೂ ಷರೀಫ್ ಬೆಂಬಲಿಗರ ಆಪಾದನೆ. ಹೀಗೆ ಕಾಂಗ್ರೆಸ್ ನಾಯಕರ ಒಗ್ಗಟ್ಟು ಕೇವಲ ಎರಡೇ ದಿನಕ್ಕೆ ಸೀಮಿತವಾಗಿದೆ. |