ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ನಗರದ ನರಸಿಂಹಮೂರ್ತಿ ಆಲಿಯೂಸ್ ಪೂಣೆ ಎಂಬಾತನನ್ನು ಕೊಲೆಗೈದ ಪ್ರಕರಣದ ಹತ್ತು ಮಂದಿ ಆರೋಪಿಗಳನ್ನು ಶನಿವಾರ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನರಸಿಂಹಮೂರ್ತಿ ಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಪಾಲಿ ಆನಂದ್ ಸೇರಿದಂತೆ ಎಲ್ಲಾ ಹತ್ತು ಮಂದಿ ಆರೋಪಿಗಳನ್ನು ಸೆರೆ ಹಿಡಿದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಮತ್ತೊಂದು ಕೊಲೆಗಾಗಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಕ್ರಿಮಿನಲ್ಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಯಲ್ ಎಸ್ಟೇಟ್ ದಂಧೆ ಹಾಗೂ ಬಡ್ಡಿ ವ್ಯವಹಾರದ ವೈಷಮ್ಯವೇ ನರಸಿಂಹ ಮೂರ್ತಿ ಕೊಲೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೊದಲು ಕಪಾಲಿ ಆನಂದ್ ಮೇಲೆ ನರಸಿಂಹಮೂರ್ತಿ ಸಹಚರರು ಮಾರಣಾಂತಿಕ ದಾಳಿ ನಡೆಸಿದ ಪರಿಣಾಮವೇ ಹತ್ಯೆ ನಡೆದಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಆಜಾದ್ ನಗರದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ನರಸಿಂಹ ಮೂರ್ತಿ ಅವರು ಗುರುವಾರ ಬೆಳಿಗ್ಗೆ ಸ್ಕಾರ್ಪಿಯೋದಲ್ಲಿ ಆಗಮಿಸುತ್ತಿದ್ದ ವೇಳೆ, ಸ್ಕಾರ್ಪಿಯೋವನ್ನು ದಾರಿ ಮಧ್ಯೆಯೇ ತಡೆದು ನಿಲ್ಲಿಸಿ, ಅವರನ್ನು ಹೊರಗೆಳೆದು ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. |